ಕಾಸರಗೋಡು: ಇಂದು ಮುಂಜಾನೆ ಸಂಭವಿಸಿದ ಬೆಂಕಿ ಆಕಸ್ಮಿಕದಿಂದ ಮನೆಯೊಂದು ಉರಿದು ನಾಶಗೊಂಡ ಘಟನೆ ನಡೆದಿದೆ. ಪಾಲಕುನ್ನು- ಆರಾಟುಕಡವು ರಸ್ತೆಯ ಕಣಿಯಂಬಾಡಿ ಎಂಬಲ್ಲಿನ ಕೆ. ಕುಂಞಿರಾಮನ್ ಎಂಬವರ ಜನವಾಸವಿಲ್ಲದ ಮನೆ ಬೆಂಕಿಗಾಹುತಿಯಾಗಿದೆ. ಇಂದು ಮುಂಜಾನೆ 3 ಗಂಟೆ ವೇಳೆ ಘಟನೆ ಸಂಭವಿಸಿದೆ. ಕುಂಞಿರಾಮನ್ ಹಾಗೂ ಕುಟುಂಬ ಸಮೀಪದಲ್ಲೇ ಇರುವ ಬೇ ರೊಂದು ಮನೆಯಲ್ಲಿ ವಾಸಿಸುತ್ತಿದ್ದಾರೆ. ನಿನ್ನೆ ರಾತ್ರಿ ಕುಂಞಿರಾಮನ್ ಹಾಗೂ ಕುಟುಂಬ ತೃಕ್ಕನ್ನಾಡ್ ಕ್ಷೇತ್ರಕ್ಕೆ ತೆರಳಿದ್ದರು. ಇಂದು ಮುಂಜಾನೆ 1 ಗಂಟೆ ವೇಳೆ ಮರಳಿ ಬಂದಿದ್ದಾರೆ. ಆ ವೇಳೆ ಮನೆಗೆ ಬೆಂಕಿ ತಗಲಿರಲಿಲ್ಲವೆನ್ನಲಾಗಿದೆ. ಮುಂಜಾನೆ 3 ಗಂಟೆ ವೇಳೆ ನೆರೆಮನೆ ನಿವಾಸಿಯಾದ ಹರಿ ಎಂಬವರು ಮನೆಗೆ ಬೆಂಕಿ ಹತ್ತಿಕೊಂಡಿರುವುದನ್ನು ಮೊದಲು ಕಂಡಿದ್ದಾರೆ. ಈ ವಿಷಯವನ್ನು ಕುಂಞಿರಾಮನ್ರಿಗೆ ತಿಳಿಸಿದ್ದು ಬಳಿಕ ಅವರು ನೀಡಿದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿದೆ. ಮನೆಯ ಮೇಲ್ಛಾವಣಿ ಪೂರ್ಣವಾಗಿ ಹೊತ್ತಿ ಉರಿದಿದೆ. ಮನೆಯೊಳಗಿದ್ದ ಮರದ ಪೀಠೋಪಕರಣ, ಟಿ.ವಿ, ಭತ್ತ ಸಂಗ್ರಹಿಸಿಡುವ ಪತ್ತಾಯ ಮೊದಲಾದವುಗಳು ಉರಿದು ನಾಶಗೊಂಡಿವೆ. ಲಕ್ಷಾಂತರ ರೂಪಾಯಿಗಳ ನಷ್ಟವುಂಟಾಗಿ ರುವುದಾಗಿ ತಿಳಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗಲಿರ ಬಹುದೆಂದು ಸಂಶಯಿಸಲಾಗುತ್ತಿದೆ.






