ಕುಂಬಳೆ: ಆನ್ಲೈನ್ ಟ್ರೇಡಿಂಗ್ ಮೂಲಕ ಭಾರೀ ಲಾಭ ಗಳಿಸಬಹುದೆಂಬ ಭರವಸೆಯೊಡ್ಡಿ ಇಚ್ಲಂಗೋಡು ನಿವಾಸಿ ಸುರೇಶ್ ಶೆಟ್ಟಿ (54) ಎಂಬವರ 34,47,777 ರೂಪಾಯಿಗಳನ್ನು ಲಪಟಾಯಿಸಿರುವುದಾಗಿ ದೂರಲಾಗಿದೆ. ಹಣ ನಷ್ಟಗೊಂಡ ಬಗ್ಗೆ ಲಭಿಸಿದ ದೂರಿನಂತೆ ಕಾಸರಗೋಡು ಸೈಬರ್ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 2025 ಸೆಪ್ಟಂಬರ್ 2ರಿಂದ ಡಿಸೆಂಬರ್ 30ರವರೆಗಿನ ದಿನಗಳಲ್ಲಿ ವಂಚನೆ ನಡೆಸಲಾಗಿದೆ. ಫೇಸ್ಬುಕ್, ವಾಟ್ಸಪ್, ಟೆಲಿಗ್ರಾಂ ಎಂಬಿವುಗಳ ಮೂಲಕ ಸಂದೇಶಗಳನ್ನು ಕಳುಹಿಸಿ ದೂರುದಾತನನ್ನು ವಂಚನೆಯಲ್ಲಿ ಸಿಲುಕಿಸಿರುವುದಾಗಿ ಸೈಬರ್ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ವಿವಿಧ ಖಾತೆಗಳಿಗೆ ಹಲವು ಬಾರಿಯಾಗಿ ಹಣ ಕಳುಹಿಸಿರುವುದಾಗಿ ದೂರುದಾತ ತಿಳಿಸಿದ್ದಾರೆ. ಆದರೆ ಲಾಭದ ಪಾಲು ಅಥವಾ ನೀಡಿದ ಹಣವನ್ನು ಮರಳಿ ನೀಡದ ಹಿನ್ನೆಲೆಯಲ್ಲಿ ವಂಚನೆಗೀಡಾಗಿರುವುದು ತಿಳಿದು ಬಂದಿದೆ. ಇದೇ ವೇಳೆ ಸೈಬರ್ ವಂಚನೆ ವಿರುದ್ಧ ಜಾಗ್ರತೆ ಪಾಲಿಸುವಂತೆ ನಿರ್ದೇಶ ನೀಡುತ್ತಿದ್ದು ಅಲ್ಲದೆ ತಿಳುವಳಿಕೆ ಮೂಡಿಸುತ್ತಿರುವಾಗಲೇ ಈ ರೀತಿಯ ವಂಚನೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕೆಲವು ವಾರಗಳ ಹಿಂದೆಯಷ್ಟೇ ನೀಲೇಶ್ವರದ ಓರ್ವ ವೈದ್ಯರ ಕೋಟ್ಯಂತರ ರೂಪಾಯಿಗಳನ್ನು ಸೈಬರ್ ವಂಚನಾ ತಂಡ ಲಪಟಾಯಿಸಿದ ಘಟನೆ ವರದಿಯಾಗಿತ್ತು.







