ಬೆಳ್ಳೂರು: ಬೆಳ್ಳೂರು, ಎಣ್ಮಕಜೆ ಪಂಚಾಯತ್ ಗಡಿ ಪ್ರದೇಶದಲ್ಲಿ ಚಿರತೆ ಕಂಡುಬಂದಿರುವುದು ಸ್ಥಳೀಯರಲ್ಲಿ ಮತ್ತೆ ಭೀತಿಗೆ ಕಾರಣವಾಗಿದೆ. ಬೇಡಡ್ಕ ಪಂಚಾಯತ್ನ ಕೊಳತ್ತೂರಿನಿಂದ ಅರಣ್ಯ ಇಲಾಖೆ ಬೋನಿನಲ್ಲಿ ಸೆರೆಹಿಡಿದ ಚಿರತೆಯನ್ನು ಕೇರಳ-ಕರ್ನಾಟಕ ವ್ಯಾಪ್ತಿಯ ಬಂಟಾಜೆ ರಕ್ಷಿತಾರಣ್ಯ, ಪಾಣಾಜೆ, ಆರ್ಲಪದವು ಜನವಸತಿ ಪ್ರದೇಶದಲ್ಲಿ ತೆರೆದುಬಿಟ್ಟಿದ್ದರೆಂದು ಈ ಹಿಂದೆ ವಿವಾದ ಸೃಷ್ಟಿಯಾಗಿತ್ತು. ಈ ಪರಿಸರದಲ್ಲಿ ಕಳೆದ ಬುಧವಾರ ರಾತ್ರಿ ಚಿರತೆಯನ್ನು ಹೋಲುವ ಪ್ರಾಣಿಯೊಂದರನ್ನು ಸ್ಥಳೀಯನಾದ ಓರ್ವರು ದೇವಸ್ಥಾನದಿಂದ ಮರಳುತ್ತಿದ್ದ ವೇಳೆ ಕಂಡಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರ್ಲಪದವು ಬದ್ರಿಯಾ ಮಸೀದಿಯಲ್ಲಿರುವ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಚಿರತೆಯನ್ನು ಹೋಲುವ ಪ್ರಾಣಿಯೊಂದು ಸಂಚರಿಸುತ್ತಿರುವುದು ಕಂಡುಬಂದಿದೆ. ಇದು ಚಿರತೆಯೇ ಎಂಬುವುದನ್ನು ದೃಢೀಕರಿಸಲಾಗದಿದ್ದರೂ ಅರಣ್ಯಇಲಾಖೆ ಇದನ್ನು ಅಲ್ಲಗಳೆಯುತ್ತಿಲ್ಲ. ಸ್ಥಳೀಯರು ಗಾಬರಿಯಾಗದೆ ರಾತ್ರಿ ಸಮಯದಲ್ಲಿ ಜಾಗ್ರತೆ ವಹಿಸುವಂತೆ ಕರ್ನಾಟಕ ಅರಣ್ಯ ಇಲಾಖೆ ಎಚ್ಚರಿಸಿದೆ. ಈ ಪರಿಸರದಲ್ಲಿ ವಾಹನ ಪ್ರಚಾರದ ಮೂಲಕ ಜಾಗ್ರತಾ ನಿರ್ದೇಶಗಳನ್ನು ನೀಡಲಾಗಿದೆ. ಮುಂಜಾಗ್ರತೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರು ವುದಾಗಿ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.







