ಮಂಜೇಶ್ವರ: ಜನರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಮಂಜೇಶ್ವರ ತಾಲೂಕು ರೂಪಿಸಲಾ ಯಿತಾದರೂ ತಾಲೂಕು ಕಚೇರಿಗೆ ಸೂಕ್ತ ಕಟ್ಟಡ ಇಲ್ಲದ ಕಾರಣ ಜನರಿಗೆ ಸರಿಯಾದ ಪ್ರಯೋಜನ ಲಭಿಸುತ್ತಿಲ್ಲ ವೆಂದು ಸ್ಥಳೀಯರು ದೂರಿದ್ದಾರೆ. ಮಂಜೇಶ್ವರ ತಾಲೂಕು ರೂಪೀಕೃತಗೊಂಡು 11 ವರ್ಷ ಕಳೆದಿದ್ದು, ತಾಲೂಕು ಕಚೇರಿಗೆ ಸ್ವಂತ ಕಟ್ಟಡ ಇನ್ನೂ ಮರೀಚಿಕೆಯಾ ಗಿದೆ. ಉಪ್ಪಳ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಈಗ ಕಚೇರಿ ಕಾರ್ಯಾ ಚರಿಸುತ್ತಿದೆ. ಆದರೆ ಇಲ್ಲಿ ಸೌಕರ್ಯ ಗಳ ಕೊರತೆ ಜನರಿಗೆ ಸಮಸ್ಯೆಯಾಗಿದೆ. ಅಲ್ಲದೆ ಕಚೇರಿಗೆ ತೆರಳಲು 40ರಷ್ಟು ಮೆಟ್ಟಿಲು ಹತ್ತಬೇಕಾಗಿದ್ದು ಇದು ಮಹಿಳೆಯರು, ವೃದ್ಧರನ್ನು ಸಂಕಷ್ಟಕ್ಕೀ ಡುಮಾಡುತ್ತಿದೆ. ವಿವಿಧ ಅಗತ್ಯಗಳಿಗೆ ದಿನವೂ ತಾಲೂಕು ಕಚೇರಿಗೆ ಬರ ಬೇಕಾಗುತ್ತಿದ್ದು, ಈ ವೇಳೆ ಮೆಟ್ಟಿಲು ಹತ್ತಿ ಇಳಿದು ಸುಸ್ತಾಗುತ್ತಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ.
ಜನಪ್ರತಿನಿಧಿಗಳು, ಅಧಿಕಾರಿಗಳು ಉತ್ಸುಕತೆ ವಹಿಸದಿರುವುದೇ ಮಂಜೇಶ್ವರ ತಾಲೂಕು ಕಚೇರಿಗೆ ಕಟ್ಟಡ ನಿರ್ಮಾಣ ಇನ್ನೂ ಸಾಧ್ಯವಾಗದಿರಲು ಕಾರಣವೆಂದು ಸ್ಥಳೀಯರು ದೂರುತ್ತಾರೆ. ಇದರ ಜೊತೆಯಲ್ಲೇ ರೂಪುಗೊಂಡ ವೆಳ್ಳರಿಕುಂಡ್ ತಾಲೂಕು ಕಚೇರಿಗೆ ಕಟ್ಟಡ ನಿರ್ಮಾಣಗೊಂಡು ಕಚೇರಿ ಈಗ ಹೊಸ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಕೇವಲ ಜನರ ಬೇಡಿಕೆಯನ್ನು ಪರಿಗಣಿಸಿ ತಾಲೂಕು ಘೋಷಿಸಲಾಯಿತಾದರೂ ತಾಲೂಕು ಕಚೇರಿಯಲ್ಲಿ ಅಗತ್ಯದ ಸೌಕರ್ಯವಿಲ್ಲದಿದ್ದರೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗುವುದಲ್ಲದೆ ಬೇರೆ ಯಾವುದೇ ಫಲವಿಲ್ಲವೆಂದು ಸ್ಥಳೀಯರು ನುಡಿಯುತ್ತಾರೆ.







