ಪುತ್ರ ಶಾಲೆಯಿಂದ ಮನೆಗೆ ತಲುಪಿದಾಗ ತಾಯಿ ರಕ್ತದ ಮಡುವಿನಲ್ಲಿ: ತಲೆಗೆ ಬಡಿದು ಕೊಲೆಗೈದ ಪತಿ ಪರಾರಿ

ಇಡುಕ್ಕಿ: ಉಪ್ಪುತ್ತರದಲ್ಲಿ ಪತಿ ಪತ್ನಿಯನ್ನು ತಲೆಗೆ ಬಡಿದು ಕೊಲೆಗೈದ ಘಟನೆ ನಡೆದಿದೆ. ಉಪ್ಪುತ್ತರ ಮಲಯಕ್ಕಾವಿಲ್ ನಿವಾಸಿ  ರಜನಿ (37) ಕೊಲೆಗೀಡಾದ ಯುವತಿ.  ಪತಿ ಸುಬಿನ್‌ಗಾಗಿ ಪೊಲೀಸರು ತನಿಖೆ ಆರಂಭಿಸಿದ್ದು, ಈತ ಮಲೆಮರೆಸಿಕೊಂಡಿದ್ದಾ ನೆನ್ನಲಾಗಿದೆ.  ಪತಿ-ಪತ್ನಿಯ ಮಧ್ಯೆ ಪ್ರತಿದಿನ ವಾಗ್ವಾದ ಉಂಟಾಗುತ್ತಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಉಪ್ಪುತ್ತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಒಂದು ತಿಂಗಳ ಹಿಂದೆ ಇವರಿಬ್ಬರು ಒಂದೇ ಮನೆಯಲ್ಲಿ ವಾಸ ಆರಂಭಿಸಿದ್ದರು. ಮಂಗಳವಾರ ಇವರ ಸಣ್ಣ ಮಗ ಶಾಲೆಯಿಂದ ಬಂದಾಗ ರಜನಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡಿದ್ದಾನೆ. ಕೂಡಲೇ ಆತ ಬೊಬ್ಬೆ ಹೊಡೆದಿದ್ದು, ನೆರೆಮನೆ ನಿವಾಸಿಗಳು ತಲುಪಿದ್ದಾರೆ.  ಜನಪ್ರತಿನಿಧಿ ಬಿಜು ಚೆಂಬಲಾಲ್‌ಗೆ  ಸ್ಥಳೀಯರು ಮಾಹಿತಿ ನೀಡಿದ್ದು,ಬಳಿಕ ಪೊಲೀಸರು ತಲುಪಿ ನಡೆಸಿದ ಪರಿಶೀಲನೆಯಲ್ಲಿ ರಜನಿಯ ತಲೆಗೆ ಮಾರಕ ಗಾಯ ಉಂಟಾಗಿ ರಕ್ತ ಹರಿದಿರುವುದಾಗಿ ಖಚಿತಪಡಿಸಿದರು. ಈಮಧ್ಯೆ  ಮಧ್ಯಾಹ್ನ 1.30ರ ಹೊತ್ತಿಗೆ ಪತಿ ಸುಬಿನ್ ಬಸ್ಸೇರಿ ಹೋಗುತ್ತಿರುವುದನ್ನು ಸ್ಥಳೀಯರಲ್ಲಿ ಕೆಲವು ನೋಡಿದ್ದಾರೆನ್ನಲಾಗಿದೆ. ಈ ದಂಪತಿಗೆ ಮೂರು ಮಂದಿ ಮಕ್ಕಳಿದ್ದಾರೆ.  ಮೃತದೇಹವನ್ನು ಉಪ್ಪುತ್ತರ ಸರಕಾರ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

You cannot copy contents of this page