ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ಚಟ್ಟಂಚಾಲ್- ಚೆರ್ಕಳ ರಸ್ತೆಯನ್ನು ಎರಡು ವಾರಕ್ಕೆ ಮುಚ್ಚುಗಡೆಗೊಳಿಸಲು ನಿರ್ಧರಿಸಲಾಗಿದೆ. ಇದರಂತೆ ನಾಳೆಯಿಂದ ಎರಡು ವಾರಕ್ಕೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಯಂತ್ರಣ ಹೇರಲಾಗುವುದು. ಆದರೆ ರಂಜಾನ್ ಪರಿಗಣಿಸಿ ಎರಡು ದಿನಕ್ಕೆ ನಿರ್ಧಾರವನ್ನು ಮುಂದೂಡಲು ಸಾಧ್ಯತೆ ಇದೆ ಎಂಬ ಸೂಚನೆಯಿದೆ. ಪ್ರಸ್ತುತ ಕೈಗೊಂಡ ತೀರ್ಮಾನ ಪ್ರಕಾರ ಕಣ್ಣೂರು ಭಾಗದಿಂದ ಬರುವ ವಾಹನಗಳು ಚಟ್ಟಂಚಾಲ್ ಮೇಲ್ಸೇತುವೆಗೆ ಪ್ರವೇಶಿಸದೆ ಸರ್ವೀಸ್ ರಸ್ತೆ ಮೂಲಕ ಚಟ್ಟಂಚಾಲ್- ಪರವನಡ್ಕ ರಸ್ತೆಯ ಮೂಲಕ ಸಂಚರಿಸಿ ಕೆಎಸ್ಟಿಪಿ ರಸ್ತೆಯಲ್ಲಿ ಕಾಸರಗೋಡಿಗೆ ತೆರಳಬೇಕು. ಮಂಗಳೂರಿನಿಂದ ಬರುವ ವಾಹನಗಳು ಅಡ್ಕತ್ತಬೈಲಿನಿಂದ ಸರ್ವೀಸ್ ರಸ್ತೆಗೆ ಪ್ರವೇಶಿಸಿ ಹಳೆಯ ಪ್ರೆಸ್ಕ್ಲಬ್ ಜಂಕ್ಷನ್ನಿಂದ ಕೆಎಸ್ಟಿಪಿ ರಸ್ತೆ ಮೂಲಕ ಕಣ್ಣೂರು ಭಾಗಕ್ಕೆ ತೆರಳಬೇಕಾಗಿದೆ. ಸಾರಿಗೆ ನಿಯಂತ್ರಣ ವಿವಿಧ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ ಎಂದು ಹೇಳಲಾಗುತ್ತಿದೆ






