ಸೀತಾಂಗೋಳಿ: ಸೂರಂಬೈಲು ಸಾಯಿರಾಂ ನಗರದಲ್ಲಿ ಮಾರ್ಚ್ ೮ರಂದು ನಡೆಯಲಿರುವ ಪುತ್ತಿಗೆ ಪಂಚಾಯತ್ ಮಟ್ಟದ ವಿರಾಟ್ ಹಿಂದೂ ಸಂಗಮದ ಅಂಗವಾಗಿ ನಿನ್ನೆ ಮಹಾ ಸಂಪರ್ಕ ಅಭಿಯಾನ ನಡೆಯಿತು. ಶಡ್ರಂಪಾಡಿ, ಮುಗು ದೇವಸ್ಥಾನಗಳಿಂದ ಆರಂಭಗೊಂಡ ಅಭಿಯಾನ ಮುಗು, ಅನೋಡಿಪಳ್ಳ, ವಿಕಾಸ್ನಗರ, ಕಣ್ಣೂರು, ಸೂರಂಬೈಲು ಪ್ರದೇಶದ ಮನೆಗಳನ್ನು ಸಂಪರ್ಕಿಸಲಾ ಯಿತು. ಆಮಂತ್ರಣ ಪತ್ರ ಮತ್ತು ಓಂಕಾರ ಧ್ವಜಗಳನ್ನು ವಿತರಿಸಲಾಯಿತು.
ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಕಲ್ಪೋಕ್ತ ಶ್ರೀ ಲಕ್ಷ್ಮೀ ಸತ್ಯನಾರಾಯಣ ಪೂಜೆ ವೇಳೆ ಆಮಂತ್ರಣ ಪತ್ರ ಮತ್ತು ಧ್ವಜವನ್ನು ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಶಂಕರನಾರಾಯಣ ಭಟ್ ಎಡನಾಡು ಅವರಿಗೆ ಸಮಿತಿ ಅಧ್ಯಕ್ಷ ದಾಮೋದರ ದೇಲಂಪಾಡಿ ಹಸ್ತಾಂತರಿಸಿದರು. ಅಶೋಕ್ ಮಾಸ್ತರ್ ಬಾಡೂರು, ಪ್ರಸಾದ್ ಯೆಯ್ಯೂರು ಉಪಸ್ಥಿತರಿದ್ದರು. ಮಾರ್ಚ್ ೧ರಿಂದ ಮಾರ್ಚ್ ೮ರ ತನಕ ಎಲ್ಲಾ ಮನೆಗಳಲ್ಲೂ ಧ್ವಜಾರೋಹಣ ನಡೆಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸೂಚನೆ ನೀಡಲಾಯಿತು. ಮಾರ್ಚ್ ೧ರಂದು ಬೆಳಿಗ್ಗೆ ಪೆರ್ಮುದೆಯಿಂದ ಸಾಯಿರಾಂ ಭಟ್ ನಗರದವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.






