ಕಾಸರಗೋಡು: ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು’ ಇದೊಂದು ಹಳೆಯ ಪ್ರಸಿದ್ಧ ಚಿತ್ರಗೀತೆ. ಆದರೆ ಬಟ್ಟಂಪಾರೆ ಸೂರ್ಲು ರಸ್ತೆಯಲ್ಲಿ ನೆಲದ ಮೇಲೆಯೂ ದೋಣಿ ಸಾಗುವಂತಹ ಪರಿಸ್ಥಿತಿಯನ್ನು ಜಲಪ್ರಾಧಿಕಾರ ನಿರ್ಮಿಸಿದೆ. ಇಲ್ಲಿ ಕಳೆದ ಕೆಲವು ತಿಂಗಳುಗಳಿಂದ ರಸ್ತೆಯಲ್ಲಿ ನೀರು ಕಟ್ಟಿ ನಿಂತು ಹೊಳೆಯಂತಾಗಿದೆ. ಈ ಪರಿಸರದಲ್ಲಿ ಸಾಗಿದ ಪೈಪ್ ಎಲ್ಲೋ ಹಾನಿಗೊಂಡು ನೀರು ಪೋಲಾಗಿ ರಸ್ತೆಯಲ್ಲಿರುವ ಹೊಂಡಗಳಲ್ಲಿ ತುಂಬಿಕೊಳ್ಳುತ್ತಿದೆ.
ತೀವ್ರ ನೀರಿನ ಕ್ಷಾಮ ಉಂಟಾಗಬಹುದಾದ ಬೇಸಿಗೆ ಸಮೀಪದಲ್ಲೇ ಇದ್ದು, ಆದರೆ ಅಧಿಕಾರಿಗಳು ನೀರು ಪೋಲಾಗುವುದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳದಿರುವುದು ಜನರಲ್ಲಿ ರೋಷಕ್ಕೆ ಕಾರಣವಾಗುತ್ತಿದೆ. ಕುಡಿಯುವ ನೀರು ಅಮೂಲ್ಯವಾಗಿದೆ ಎಂದು ಹೇಳಲಾಗುತ್ತಿದೆಯಾದರೂ ರಸ್ತೆಯಲ್ಲಿ ಪೋಲಾಗಿ ಹೋಗುವ ನೀರಿಗೆ ಯಾವುದೇ ಮೌಲ್ಯ ಇಲ್ಲವೆಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ವಿವಿಧ ಕಡೆಗಳಲ್ಲಿ ಹಾಳಾಗಿ ಹೋಗುವ ನೀರು ಸೂಕ್ತ ರೀತಿಯಲ್ಲಿ ದುರಸ್ತಿಗೊಳಿಸಿ ಜನರಿಗೆ ಲಭ್ಯಗೊಳಿಸುವಂತೆ ಮಾಡಿದರೆ ಅದೆಷ್ಟೋ ಕುಟುಂಬಗಳು ನೀರಿನ ಸಂಕಷ್ಟದಿಂದ ಪಾರಾಗಲು ಸಾಧ್ಯವಿದೆ ಎಂದು ಸ್ಥಳೀಯರು ಎಚ್ಚರಿಸುತ್ತಿದ್ದಾರೆ.






