ಮುಳ್ಳೇರಿಯ: ನಿಯಂತ್ರಣ ತಪ್ಪಿದ ವ್ಯಾನ್ ಮನೆಯ ಮೇಲೆ ಬಿದ್ದು ಇಬ್ಬರು ಗಾಯಗೊಂಡ ಘಟನೆ ಬೆಳ್ಳೂರು ಬಳಿಯ ಪಡ್ಡೈಮೂಲೆ ಎಂಬಲ್ಲಿ ನಡೆದಿದೆ.
ಪಡ್ಡೈಮೂಲೆಯ ಸುರೇಶ್ರ ಪುತ್ರ ಕೆ. ಸುನಿಲ್ ಕುಮಾರ್ (33), ಕಾರು ಚಾಲಕ ಕರುವಲ್ತಡ್ಕ ನಿವಾಸಿ ಅಶ್ರಫ್ ಎಂಬವರು ಗಾಯಗೊಂಡಿದ್ದಾರೆ. ಇವರನ್ನು ಮುಳ್ಳೇರಿಯದ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಅಪರಾಹ್ನ ೩.೩೦ರ ವೇಳೆ ಈ ಅಪಘಾತವುಂಟಾಗಿದೆ. ಅಡಿಕೆಯೊಂದಿಗೆ ಕರ್ನಾಟಕಕ್ಕೆ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆಯ ಕೆಳಭಾಗದಲ್ಲಿರುವ ಮನೆ ಮೇಲೆ ಬಿದ್ದಿದೆ. ಈ ವೇಳೆ ಮನೆಯಲ್ಲಿ ಸುನಿಲ್ ಕುಮಾರ್ರ ದೇಹದ ಮೇಲೆ ಗೋಡೆಯ ಕಲ್ಲುಗಳು ಹಾಗೂ ಮೇಲ್ಛಾವಣಿಯ ಶೀಟ್ ಮತ್ತಿತರ ಸಾಮಗ್ರಿಗಳು ಬಿದ್ದಿದೆ. ಮನೆಯೊಳಗಿದ್ದ ಸುನಿಲ್ ಕುಮಾರ್ರ ಸಹೋದರಿ ಸುಲೋ ಚನ, ತಾಯಿಯ ಸಹೋದರಿಯ ಮಗ ನಾರಂಪಾಡಿಯ ಅಶ್ವತ್ಥ್ ರಾಜ್ ಎಂಬವರು ಶಬ್ದ ಕೇಳಿ ಹೊರಗೆ ಓಡಿದುದರಿಂದ ಅಪಾಯ ದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.
ವ್ಯಾನ್ ಬಿದ್ದುದರಿಂದ ಮನೆ ಬಹುತೇಕ ನಾಶಗೊಂಡಿದೆ. ಗೋಡೆ ಹಾಗೂ ಮೇಲ್ಛಾವಣಿಗೆ ಹೊದಿಸಿದ ಶೀಟ್ಗಳು ಪುಡಿಗೈಯ್ಯಲ್ಪಟ್ಟಿದೆ. ಎರಡು ತಿಂಗಳ ಹಿಂದೆಯೂ ಇದೇ ಸ್ಥಳದಲ್ಲಿ ಕಾರೊಂದು ಅಪಘಾಕ್ಕೀಡಾಗಿತ್ತು. ಈ ವೇಳೆ ಕಾರು ರಸ್ತೆ ಬದಿಯ ಆವರಣಗೋಡೆಗೆ ಬಡಿದು ನಿಂತಿತ್ತು.







