ಕುಂಬಳೆ: ಕುಂಬಳೆ ಬಳಿಯ ಯುವಕನೋರ್ವ ಮಂಗಳೂರಿನ ವಾಸಸ್ಥಳದಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಕುಂಬಳೆ ಮಾವಿನಕಟ್ಟೆ ಬಳಿಯ ವಾಳವಳಪ್ ನಿವಾಸಿ ಉದಯ ಎಂಬವರ ಪುತ್ರ ರೋಶನ್ (22) ಮೃತ ಯುವಕನಾಗಿದ್ದಾನೆ. ಮೊನ್ನೆ ರಾತ್ರಿ ಘಟನೆ ನಡೆದಿದೆ.
ಕದ್ರಿ ಶಿವಭಾಗ್ ಬಳಿಯ ಅಪಾರ್ಟ್ಮೆಂಟ್ನ ಕೊಠಡಿಯಲ್ಲಿ ಮೃತದೇಹ ಕಂಡುಬಂದಿದೆ. ಕೈಯ ನರ ಕತ್ತರಿಸಿದ ಬಳಿಕ ನೇಣು ಬಿಗಿದು ಸಾವಿಗೀಡಾಗಿರಬಹುದೆಂದು ಸಂಶಯಿಸಲಾಗುತ್ತಿದೆ. ಕೊಠಡಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಕೂಲ್ ಬಾರ್ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ರೋಶನ್ ಒಂದು ವಾರ ಹಿಂದೆ ಮನೆಗೆ ಬಂದು ಮರಳಿದ್ದನೆಂದು ಸಂಬಂಧಿಕರು ತಿಳಿಸಿದ್ದಾರೆ. ಘಟನೆ ಬಗ್ಗೆ ಕದ್ರಿ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಮೃತನು ತಂದೆ, ತಾಯಿ ಪುಷ್ಪ, ಸಹೋದರರಾದ ರಾಹುಲ್, ಅಜಯ್, ಆದಿತ್ಯನ್, ಸಹೋದರಿ ಅಮೃತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.






