ಕಣಜ ಹುಳು ದಾಳಿಯಿಂದ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿದ್ದ ಹೋಟೆಲ್ ಕಾರ್ಮಿಕ ನಿಧನ

ಉಪ್ಪಳ: ಕಣಜದ ಹುಳು ದಾಳಿಯಿಂದ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಹೋಟೆಲ್ ಕಾರ್ಮಿಕ ನಿಧನ ಹೊಂದಿದರು. ಬಾಯಾರು ಪೆರ್ವೋಡಿ ಬಳಿಯ ಪಟ್ಲ ನಿವಾಸಿ, ಸುರೇಶ್ ಯು. ಭಟ್ (79) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರಿಗೆ ಕಳೆದ ಗುರುವಾರ ಪಟ್ಲದಲ್ಲಿ ಕಣಜದ ಹುಳುಗಳು ಕಚ್ಚಿದ್ದವು. ಸಂಬಂಧಿಕರ ಮನೆಯಿಂದ ತನ್ನ ಮನೆಗೆ ನಡೆದು ಹೋಗುತ್ತಿರುವ ವೇಳೆ ಹುಳುಗಳ ಗುಂಪು ಇವರ ಮೇಲೆರಗಿದೆ. ಸ್ಥಳದಲ್ಲೇ ಬಿದ್ದಿದ್ದ ಇವರನ್ನು ಸ್ಥಳೀಯರು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದರು. ಹುಳುಗಳ ದಾಳಿಯಿಂದ ತಲೆ ದೇಹವಿಡೀ ಗಾಯಗೊಂಡಿದ್ದ ಸುರೇಶ್ ಭಟ್ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ನಿನ್ನೆ ಇವರನ್ನು ಮನೆಗೆ ಕರೆತರಲಾಗಿತ್ತು. ಇಂದು ಮುಂಜಾನೆ ನಿಧನ ಸಂಭವಿಸಿದೆ. ಮೃತರು ಪತ್ನಿ ಸುಮತಿ ಭಟ್, ಮಕ್ಕಳಾದ ಹರೀಶ್ ಭಟ್, ಗಣೇಶ್ ಭಟ್, ಶೋಭಾ, ಸುಷ್ಮಾ, ಅಳಿಯಂದಿರಾದ ಗಣೇಶ್ ಶೆಣೈ, ಗೋವಿಂದ ಮಾಲ್‌ವನ್ಕರ್, ಸೊಸೆಯಂದಿರಾದ ಸರೋಜಾ ಭಟ್, ಆಶಾ ಭಟ್, ಗಾಯತ್ರಿ ಭಟ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ನಾಗೇಶ್ ಭಟ್ ಈ ಹಿಂದೆ ನಿಧನ ಹೊಂದಿದ್ದಾರೆ.

You cannot copy contents of this page