ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ ಸ್ನೇಹಪೂರ್ವಕ ಭೇಟಿ ನೀಡಿದ ಜಮಾಅತ್ ಪದಾಧಿಕಾರಿಗಳು

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ ಜುಮಾ ಮಸೀದಿ ಸಮಿತಿ ಪದಾಧಿಕಾರಿಗಳು ಸ್ನೇಹಪೂರ್ವಕ ಕಾಣಿಕೆಯೊಂದಿಗೆ ಭೇಟಿ ನೀಡಿದರು.

ನಾಡಿನ ಮಹೋತ್ಸವವಾದ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ ಕುಂಬಳೆ ಬದರ್ ಜುಮಾ ಮಸೀದಿ ಹಾಗೂ ಕುಂಟಂಗೇರಡ್ಕ ತ್ವಾಹ ಮಸೀದಿಯಿಂದ ಕಾಣಿಕೆ ಸಮರ್ಪಿಸಲಾಯಿತು.

ಬದರ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಹಾಜಿ, ಕಾರ್ಯದರ್ಶಿ ಮಮ್ಮು ಮುಬಾರಕ್, ಕೋಶಾಧಿಕಾರಿಯೂ ತ್ವಾಹ ಮಸೀದಿ ಕಾರ್ಯದರ್ಶಿಯಾದ ಅಬ್ದುಲ್ಲ, ಮಾಜಿ ಸೆಕ್ರಟರಿ ಟಿ.ಕೆ. ಇಬ್ರಾಹಿಂ ಎಂಬಿವರ ನೇತೃತ್ವದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದ ಜಮಾಅತ್ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಕ್ಷೇತ್ರದ ಪದಾಧಿಕಾರಿಗಳು ಸ್ನೇಹಪೂರ್ವಕ ಸ್ವಾಗತಿಸಿದರು. ಸ್ವಾಗತದ ಬಳಿಕ ಪಾರಿತೋಷಕ ನೀಡಲಾಯಿತು. ವಿಕ್ರಂ ಪೈ, ಸುಧಾಕರ ಕಾಮತ್, ಜಯ ಕುಮಾರ್, ಲಕ್ಷ್ಮಣ ಪ್ರಭು, ಮಂಜುನಾಥ ಆಳ್ವ, ಶಂಕರ ಆಳ್ವ, ದಾಮೋದರ ದೇಲಂಪಾಡಿ ಮೊದಲಾ ದವರ ನೇತೃತ್ವದಲ್ಲಿ ಸ್ವಾಗತ ನೀಡಲಾಯಿತು.

ಈ ತಿಂಗಳ ೨೯ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವ, ಜಾತ್ರೆ ಮಹೋತ್ಸವದಂಗವಾಗಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯುತ್ತಿದೆ. ನಾಳೆ ಪ್ರಾತಃಕಾಲ ೪.೩೦ಕ್ಕೆ ೧೦೮ ತೆಂಗಿನ ಕಾಯಿ ಗಣಹೋಮ, ಮಧ್ಯಾಹ್ನ ೧೨.೨೧ರಿಂದ ಶ್ರೀ ಗೋಪಾಲಕೃಷ್ಣ ದೇವರು, ಶ್ರೀ ಗಣಪತಿ ದೇವರು, ಶ್ರೀ ವನ ಶಾಸ್ತಾರ ದೇವರ ಪುನಃಪ್ರತಿಷ್ಠೆ, ಉಪ ದೇವತೆಗಳ ಪ್ರತಿಷ್ಠೆ, ಶ್ರೀ ನಾಗದೇವರು, ಶ್ರೀ ವ್ಯಾಘ್ರ ಚಾಮುಂಡಿ, ಶ್ರೀ ಗುಳಿಗ ದೈವಗಳ ಪ್ರತಿಷ್ಠಾ ಬಲಿ ನಡೆಯಲಿದೆ.

೨೮ರಂದು ರಾತ್ರಿ ಬೆಡಿ ಪ್ರದರ್ಶನ ಸೇವೆ, ಶ್ರೀ ಭೂತಬಲಿ, ಮೊದಲಾದ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page