ಕುಂಬಳೆ-ಬದಿಯಡ್ಕ ಕೆಎಸ್ಟಿಪಿ ರಸ್ತೆಯಲ್ಲಿ ಮತ್ತೆ ಅಪಘಾತ: ಸ್ಲ್ಯಾಬ್ ಕುಸಿದು ಚರಂಡಿಯಲ್ಲಿ ಸಿಲುಕಿದ ಪಿಕಪ್
ಕುಂಬಳೆ: ಕುಂಬಳೆ-ಬದಿಯಡ್ಕ ಕೆಎಸ್ಟಿಪಿ ರಸ್ತೆಯಲ್ಲಿ ಮತ್ತೆ ವಾಹನ ಅಪಘಾತವುಂಟಾಗಿದೆ. ರಸ್ತೆ ಬದಿ ಚರಂಡಿಯ ಸ್ಲ್ಯಾಬ್ ಕುಸಿದು ಪಿಕಪ್ ವಾಹನ ಸಿಲುಕಿಕೊಂಡಿದೆ. ನಿನ್ನೆ ಸಂಜೆ 7 ಗಂಟೆಗೆ ಕುಂಬಳೆ ಭಾಸ್ಕರನಗರದಲ್ಲಿ ಅಪಘಾತವುಂಟಾಗಿದೆ. ಭಾಸ್ಕರನಗರದ ಕಟ್ಟಿಗೆ ಡಿಪ್ಪೋಗೆ ಕಟ್ಟಿಗೆ ಹೇರಿ ಪಿಕಪ್ ವಾಹನ ತಲುಪಿತ್ತು. ರಸ್ತೆಯಿಂದ ಡಿಪ್ಪೋದತ್ತ ಸಾಗುತ್ತಿದ್ದಂತೆ ಸ್ಲ್ಯಾಬ್ ಕುಸಿದು ಹಿಂಭಾಗದ ಚಕ್ರಗಳು ಸಿಲುಕಿಕೊಂಡಿದೆ. ಬಳಿಕ ಸೌದೆಯನ್ನು ತೆರವುಗೊಳಿಸಿ ಜೆಸಿಬಿ ಬಳಸಿ ವಾಹನವನ್ನು ಮೇಲಕ್ಕೆತ್ತಲಾಯಿತು. ಇತ್ತೀಚೆಗಷ್ಟೇ ಕುಂಬಳೆಯಲ್ಲಿ ಚರಂಡಿಯ ಸ್ಲ್ಯಾಬ್ ಕುಸಿದು ಲಾರಿಯೊಂದು ಮಗುಚಿಬಿದ್ದು ಚಾಲಕ ಗಾಯಗೊಂಡ ಘಟನೆ ನಡೆದಿತ್ತು. ನಿರ್ಮಾಣದಲ್ಲಿ ಉಂಟಾದ ಕಳಪೆ ಕಾಮಗಾರಿಯೇ ಪದೇ ಪದೇ ಚರಂಡಿಯ ಸ್ಲ್ಯಾಬ್ ಕುಸಿಯಲು ಕಾರಣವೆಂದು ನಾಗರಿಕರು ಆರೋಪಿಸುತ್ತಿದ್ದಾರೆ.