ಕಾಸರಗೋಡು: ಕಾಸರಗೋಡು-ಹೊಸದುರ್ಗ ರಾಜ್ಯ ಹೆದ್ದಾರಿಯ ತೃಕ್ಕನ್ನಾಡು ಸಮೀಪದ ಚಿರಮ್ಮಲ್ನಿಂದ ವಶಪಡಿಸಿದ 1.17 ಕೋಟಿ ರೂ. ಕಾಳಧನದ ಬಗ್ಗೆ ಪೊಲೀಸರು ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಆದಾಯ ತೆರಿಗೆ ಇಲಾಖೆಗೂ ಮಾಹಿತಿ ನೀಡಿದ್ದಾರೆ.
ಕಾರಿನೊಳಗೆ ಗುಪ್ತ ಸೆರೆ ನಿರ್ಮಿಸಿ ಅದರೊಳಗೆ ಈ ಕಾಳಧನ ಬಚ್ಚಿಡಲಾಗಿತ್ತು. ಇದಕ್ಕೆ ಸಂಬಂಧಿಸಿ ವಶಕ್ಕೆ ತೆಗೆದುಕೊಳ್ಳಲಾದ ಮೇಲ್ಪ ರಂಬ ನಿವಾಸಿ ಎಂ.ಎಸ್. ಅಬ್ದುಲ್ ಖಾದರ್ (46)ನ ಹೇಳಿಕೆ ದಾಖಲಿಸಿಕೊಂಡ ಬಳಿಕ ಆತನನ್ನು ಪೊಲೀಸರು ನ್ಯಾ ಯಾಲಯದಲ್ಲಿ ಹಾಜರುಪಡಿಸಿದ್ದಾರೆ. ನಂತರ ನ್ಯಾಯಾಲಯ ಆತನಿಗೆ ಜಾಮೀನು ಮಂಜೂರು ಮಾಡಿದೆ. ಈತ ಖಾಯಂ ಆಗಿ ಹವಾಲಾ ಹಣ ಪುರೈಸುವ ವ್ಯಕ್ತಿಯಾಗಿದ್ದಾನೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಬೇಕಲ ಡಿವೈಎಸ್ಪಿ ವಿ.ವಿ. ಮನೋಜ್, ಬೇಕಲ ಎಎಸ್ಪಿ ಡಾ. ಜಿ ಅಪರ್ಣ, ಇನ್ಸ್ಪೆಕ್ಟರ್ ಕೆ.ಪಿ. ಶೈನ್, ಪ್ರೊಬೆಷನರಿ ಎಸ್ಐಗಳಾದ ಅಖಿಲ್ ಸೆಬಾಸ್ಟಿನ್, ಮನುಕೃಷ್ಣನ್, ಎಸ್ಐ ಎಂ. ಬಾಲಚಂದ್ರನ್, ಸಿವಿಲ್ ಪೊಲೀಸ್ ಆಫೀಸರ್ಗಳಾದ ವಿಜೇಶ್, ತೀರ್ಥನ್ ಮತ್ತು ಚಾಲಕ ಸಜೋಶ್ ಎಂಬವರು ಈ ಕಾಳಧನ ಪತ್ತೆ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದಲ್ಲಿ ಒಳಗೊಂಡಿದ್ದರು.







