ನಿದ್ರಿಸಿದ್ದ ತಾಯಿಯನ್ನು ಪೆಟ್ರೋಲ್ ಸುರಿದು ಕಿಚ್ಚಿಟ್ಟು ಕೊಲೆಗೈದ ಪುತ್ರ: ನೆರೆಮನೆಯ ಯುವತಿಯನ್ನು ಕೊಲೆಗೈಯ್ಯಲು ಯತ್ನ
ಮಂಜೇಶ್ವರ: ನಿದ್ರಿಸುತ್ತಿದ್ದ ತಾಯಿಯ ಮೇಲೆ ಪುತ್ರ ಪೆಟ್ರೋಲ್ ಸುರಿದು ಕಿಚ್ಚಿಟ್ಟು ಸುಟ್ಟು ಕೊಲೆಗೈದ ಭೀಕರ ಘಟನೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಕಾಡಿಯಲ್ಲಿ ನಡೆದಿದೆ. ಮೃತದೇಹ ಮನೆ ಸಮೀಪದಲ್ಲಿರುವ ಪೊದೆಗಳೆಡೆ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆ ಕೃತ್ಯದ ಬಳಿಕ ನೆರೆಮನೆ ನಿವಾಸಿಯೂ ಸಂಬಂಧಿಕೆಯಾದ ಯುವತಿಯನ್ನು ಆರೋಪಿ ಮನೆಗೆ ಕರೆಸಿ ಆಕೆಯನ್ನೂ ಕೊಲೆಗೈಯ್ಯಲು ಯತ್ನಿಸಿದ್ದಾನೆ. ಗಂಭೀರವಾಗಿ ಸುಟ್ಟು ಗಾಯಗೊಂಡ ಯುವತಿಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ವರ್ಕಾಡಿ ನಲ್ಲೆಂಗಿ ನಿವಾಸಿ ದಿ| ಲೂಯಿಸ್ ಮೊಂತೇರೋರ ಪತ್ನಿ ಹಿಲ್ಡಾ ಮೊಂತೇರೋ (60) ಅತೀ ದಾರುಣವಾಗಿ ಕೊಲೆಗೈಯ್ಯಲ್ಪಟ್ಟಿದ್ದಾರೆ. ನೆರೆಮನೆ ನಿವಾಸಿಯಾದ ಸಂಬಂಧಿಕ ವಿಕ್ಟರ್ ಎಂಬವರ ಪತ್ನಿ ಲೋಲಿಟ (30) ಎಂಬವರು ಗಂಭೀರ ಸುಟ್ಟು ಗಾಯಗೊಂಡಿದ್ದಾರೆ. ಘಟನೆ ಬಳಿಕ ಹಿಲ್ಡಾ ಮೊಂತೇರೋರ ಪುತ್ರ ಮೆಲ್ವಿನ್ ಮೊಂತೇರೋ ತಲೆಮರೆಸಿಕೊಂಡಿದ್ದು ಆತನನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇಂದು ಮುಂಜಾನೆ ಇಡೀ ನಾಡನ್ನು ಬೆಚ್ಚಿ ಬೀಳಿಸಿದ ಈ ಭೀಕರ ಕೊಲೆಕೃತ್ಯ ಬೆಳಕಿಗೆ ಬಂದಿದೆ. ಕಟ್ಟಡ ನಿರ್ಮಾಣ ಕಾರ್ಮಿಕನಾದ ಮೆಲ್ವಿನ್ ಹಾಗೂ ತಾಯಿ ಹಿಲ್ಡಾ ಮಾತ್ರ ಮನೆಯಲ್ಲಿ ವಾಸಿಸುತ್ತಿದ್ದರು. ಇನ್ನೋರ್ವ ಪುತ್ರ ಅಲ್ವಿನ್ ಮೊಂತೆರೋ ಗಲ್ಪ್ನಲ್ಲಿದ್ದಾರೆ.
ನಿನ್ನೆ ರಾತ್ರಿ ಹಿಲ್ಡಾ ಮೊಂತೇರೋ ಆಹಾರ ಸೇವಿಸಿ ನಿದ್ರಿಸಿದ್ದರು. ಈಮಧ್ಯೆ ಪುತ್ರ ತಾಯಿಯ ದೇಹದ ಮೇಲೆ ಪೆಟ್ರೋಲ್ ಸುರಿದು ಕಿಚ್ಚಿಟ್ಟ ಬಳಿಕ ಮೃತದೇಹವನ್ನು ಮನೆ ಸಮೀಪದ ಪೊದೆಗಳೆಡೆ ಉಪೇಕ್ಷಿಸಿ ರುವುದಾಗಿ ಸಂಶಯಿಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇಂದು ಮುಂಜಾನೆ ತಾಯಿಗೆ ಸೌಖ್ಯವಿಲ್ಲವೆಂದು ತಿಳಿಸಿ ಸಂಬಂಧಿಕೆಯಾದ ಲೋಲಿ ಟರನ್ನು ಮೆಲ್ವಿನ್ ತನ್ನ ಮನೆಗೆ ಕರೆಸಿದ್ದನು. ಅವರು ಮನೆಯೊಳಗೆ ಪ್ರವೇಶಿಸಿದ ತಕ್ಷಣ ಲೋಲಿಟಾರ ದೇಹದ ಮೇಲೆ ಪೆಟ್ರೋಲ್ ಸುರಿದು ಕಿಚ್ಚಿಟ್ಟ ಬಳಿಕ ಮೆಲ್ವಿನ್ ಮನೆಯಿಂದ ಓಡಿ ಪರಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಲೋಲಿಟಾರ ಬೊಬ್ಬೆ ಕೇಳಿ ಅವರ ಮನೆಯವರು ಹಾಗೂ ಸ್ಥಳೀಯರು ಅಲ್ಲಿಗೆ ಓಡಿ ತಲುಪಿದಾಗಲೇ ಘಟನೆ ಬೆಳಕಿಗೆ ಬಂದಿದೆ. ಈ ಮಧ್ಯೆ ಮೆಲ್ವಿನ್ ಮೊಂತೇರೋ ಅಲ್ಲಿಂದ ನಾಪತ್ತೆಯಾಗಿ ದ್ದನು. ಈತ ಬಸ್ನಲ್ಲಿ ಮಂಗಳೂರು ಭಾಗಕ್ಕೆ ತೆರಳಿರಬಹುದೆಂದು ಸಂಶಯಿಸಲಾಗುತ್ತಿದೆ. ವಿಷಯ ತಿಳಿದು ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಇ . ಅನೂಬ್ ಕುಮಾರ್ರ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ತನಿಖೆ ಆರಂ ಭಿಸಿದೆ. ಪೊಲೀಸರು ನಡೆಸಿದ ತಪಾಸಣೆ ವೇಳೆ ಮೃತದೇಹ ಪೊದೆಗಳೆಡೆಯಲ್ಲಿ ಪತ್ತೆಯಾಗಿದೆ.