ಪೆರ್ಲ: ಹೊರ ರಾಜ್ಯಗಳಿಂದ ಕಾಸರಗೋಡಿಗೆ ಮಾದಕವಸ್ತು ಸಾಗಾಟ ಮತ್ತೆ ತೀವ್ರಗೊಂಡಿದೆ. ಈ ಬಗ್ಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಪೆರ್ಲದಲ್ಲಿ ಅಬಕಾರಿ ಅಧಿಕಾರಿಗಳು ನಿನ್ನೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಗಾಂಜಾ ವಶಪಡಿಸಿಕೊ ಳ್ಳಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಕುಂಬಳ ಶಾಂತಿಪಳ್ಳ ನಿವಾಸಿ ಸಹೀರ್ ರಹೀಂ (೩೬), ಪೆರ್ಲ ಅಮೆಕ್ಕಳದ ಶರೀಫ್ (೫೨) ಎಂಬಿವರು ಬಂಧಿತ ಆರೋಪಿಗಳೆಂ ದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಸಿದ ಪಿಕಪ್ ವಾಹನವನ್ನು ಕಸ್ಟಡಿಗೆ ತೆಗೆಯಲಾಗಿದೆ.
ಕರ್ನಾಟಕ ಭಾಗದಿಂದ ವಾಹನದಲ್ಲಿ ಮಾದಕವಸ್ತು ಸಾಗಾಟವಾಗುತ್ತಿರುವ ಬಗ್ಗೆ ಅಬಕಾರಿದಳದ ಸ್ಪೆಷಲ್ ಸ್ಕ್ವಾಡ್ಗೆ ಮಾಹಿತಿ ಲಭಿಸಿತ್ತು. ಇದರಂತೆ ಸ್ಪೆಶಲ್ ಸ್ಕ್ವಾಡ್ ಇನ್ಸ್ಪೆಕ್ಟರ್ ಅಮಲ್ರಾಜ್ ನೇತೃತ್ವದಲ್ಲಿ ಅಧಿಕಾರಿಗಳು ನಿನ್ನೆ ರಾತ್ರಿ ಪೆರ್ಲದಲ್ಲಿ ವಾಹನ ತಪಾಸಣೆ ನಡೆಸಿದ್ದಾರೆ. ಈ ವೇಳೆ ಆಗಮಿಸಿದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ ೧೦೭.೧೮ ಕಿಲೋ ಗಾಂಜಾವನ್ನು ಬಚ್ಚಿಟ್ಟಿರುವುದು ಕಂಡುಬಂದಿದೆ. ಕೂಡಲೇ ವಾಹನ ಹಾಗೂ ಅದರಲ್ಲಿದ್ದ ಇಬ್ಬರನ್ನು ಕಸ್ಟಡಿಗೆ ತೆಗೆಯಲಾಗಿದೆ. ಗಾಂಜಾವನ್ನು ಆಂಧ್ರ ಪ್ರದೇಶದಿಂದ ತಂದಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಂಜಾ ಸಾಗಾಟಕ್ಕೆ ಪಿಕಪ್ ವಾಹನದಲ್ಲಿ ಪ್ರತ್ಯೇಕ ಸೌಕರ್ಯ ಏರ್ಪಡಿಸಿರು ವುದು ಕೂಡಾ ಪತ್ತೆಯಾಗಿದೆ. ಬಂಧಿತರ ತನಿಖೆ ಮುಂದುವರಿಯುತ್ತಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಂಜಾ ಪತ್ತೆ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸ್ಪೆಷಲ್ ಸ್ಕ್ವಾಡ್ ಇನ್ಸ್ಪೆಕ್ಟರ್ ಹೊರತು ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ಗಳಾದ ಮುರಳಿ ಕೆ.ವಿ, ಜೈನ್ಸ್ ಅಬ್ರಹಾಂ ಕುರಿಯೊ, ಪ್ರಿವೆಂಟೀವ್ ಆಫೀಸರ್ ಸಾಜನ್ ಅಪ್ಯಾನ್, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಪ್ರಜೀತ್ ಕೆ.ಆರ್, ಸತೀಶನ್ ಕೆ, ಮಂಜುನಾಥನ್ ವಿ, ನಸರುದ್ದೀನ್ ಎ.ಕೆ, ಸೋನು ಸೆಬಾಸ್ಟಿಯನ್, ಸಿಜಿತ್ ಮೊದಲಾದವರಿದ್ದರು.






