ಪೈವಳಿಕೆ ಪಂ.ನಲ್ಲಿ ಎಡರಂಗ ಆಡಳಿತ ವಿರುದ್ಧ ಬಿಜೆಪಿಯಿಂದ ಅವಿಶ್ವಾಸ ಗೊತ್ತುವಳಿ: ಯುಡಿಎಫ್ ನಿಲುವು ನಿರ್ಣಾಯಕ

ಪೈವಳಿಕೆ: ಲೋಕಸಭಾ ಚುನಾವಣೆಯಲ್ಲಿ ಎಲ್‌ಡಿಎಫ್, ಯುಡಿಎಫ್ ಹಾಗೂ ಎನ್‌ಡಿಎ ಪರಸ್ಪರ  ಸೆಣಸಾಡಲು ಸಿದ್ಧವಾಗಿರು ವಾಗಲೇ ಪೈವಳಿಕೆ ಪಂಚಾಯತ್‌ನಲ್ಲಿ ಎಡರಂಗ ನೇತೃತ್ವದ ಆಡಳಿತ ಮುಂದುವರಿಯಬೇಕಾದರೆ ಐಕ್ಯರಂಗದ ಸಹಾಯ ಬೇಕಾಗಿ ಬರಲಿದೆಯೆಂಬ ಮಾತುಗಳು ಕೇಳಿಬರುತ್ತಿದೆ.

ಪಂಚಾಯತ್ ಅಧ್ಯಕ್ಷೆ ವಿರುದ್ಧ  ಬಿಜೆಪಿ  ಸದಸ್ಯರು  ಅವಿಶ್ವಾಸ ಗೊತ್ತುವಳಿಗೆ ನೋಟೀಸು ನೀಡಿದ ಹಿನ್ನೆಲೆಯಲ್ಲಿ ಇಂತಹವೊಂದು ಪರಿಸ್ಥಿತಿಗೆ ಕಾರಣವಾಗಿದೆ. ಸಿಪಿಎಂ ನಿಯಂತ್ರಣದಲ್ಲಿರುವ ಆಡಳಿತ ಸಮಿತಿ ಏಕಪಕ್ಷೀಯ ನಿರ್ಧಾರವನ್ನು  ಕೈಗೊಳ್ಳುತ್ತಿದೆಯೆಂದೂ ಅಭಿವೃದ್ಧಿ ಚಟುವಟಿಕೆಗಳನ್ನು ಸಿಪಿಎಂ ವಾರ್ಡ್ ಗಳಿಗೆ ಮಾತ್ರವೇ ಸೀಮಿತಗೊಳಿಸ ಲಾಗಿದೆಯೆಂದು ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ. ಪಂಚಾಯತ್ ಆಡಳಿತ ವಿರುದ್ಧ ಬಿಜೆಪಿಯ ಎಂಟು ಮಂದಿ ಸದಸ್ಯರು ಬ್ಲೋಕ್  ಪಂಚಾಯತ್ ಕಾರ್ಯದರ್ಶಿಗೆ ಅವಿಶ್ವಾಸ ಗೊತ್ತುವಳಿ  ಠರಾವಿಗೆ ನೋಟೀಸು ನೀಡಿದ್ದಾರೆ. ಸೋಮವಾರ ನಡೆಯುವ ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ಕಾಂಗ್ರೆಸ್, ಲೀಗ್ ಸದಸ್ಯರು ಸಿಪಿಎಂನ್ನು ಬೆಂಬಲಿ ಸಿದರೆ ಅವಿಶ್ವಾಸ ಗೊತ್ತುವಳಿ ಪರಾಭವಗೊಳ್ಳ ಲಿದೆ. ಇದೀಗಿನ ಪರಿಸ್ಥಿತಿಯಲ್ಲಿ ಯುಡಿಎಫ್ ನಿಷ್ಪಕ್ಷ ನಿಲುವು ಅನುಸರಿಸಿದರೆ ಚೀಟಿ ಎತ್ತುವ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿ ಬರಲಿದೆ. ಇದರಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಪಂಚಾಯತ್‌ನಲ್ಲಿ ಎಲ್‌ಡಿಎಫ್ ಆಡಳಿತ ನಷ್ಟಗೊಳ್ಳಲಿದೆ. ಇದೇ ವೇಳೆ ಎಲ್‌ಡಿಎಫ್, ಯುಡಿಎಫ್ ಸೇರಿ  ಬಿಜೆಪಿ ಸದಸ್ಯೆಯಾದ ಉಪಾ ಧ್ಯಕ್ಷೆ ವಿರುದ್ಧ  ಅವಿಶ್ವಾಸ ಗೊತ್ತುವಳಿ ಮಂಡನೆಗೆ ನೋಟೀಸು ನೀಡುವರೆಂದು ಸೂಚನೆಯಿದೆ. ಪೈವಳಿಕೆ ಪಂಚಾಯತ್‌ನಲ್ಲಿ ಒಟ್ಟು ೧೯ ಮಂದಿ ಸದಸ್ಯರ ಪೈಕಿ ಬಿಜೆಪಿಗೆ ಎಂಟು, ಸಿಪಿಎಂಗೆ ಏಳು, ಸಿಪಿಐಗೆ ಓರ್ವ ಸದಸ್ಯರಿದ್ದಾರೆ.  ಅದೇ ರೀತಿ ಮುಸ್ಲಿಂ ಲೀಗ್‌ಗೆ ಇಬ್ಬರು, ಕಾಂಗ್ರೆಸ್‌ಗೆ ಓರ್ವ ಸದಸ್ಯರಿದ್ದಾರೆ.

ಪಂಚಾಯತ್ ಚುನಾವಣೆ ಬಳಿಕ ನಡೆದ  ಚೀಟಿ ಎತ್ತುವಿಕೆಯಲ್ಲಿ  ಅಧ್ಯಕ್ಷೆಯಾಗಿ ಸಿಪಿಎಂನ ಜಯಂತಿ,  ಉಪಾಧ್ಯಕ್ಷೆಯಾಗಿ ಬಿಜೆಪಿಯ ಪುಷ್ಪ ಲಕ್ಷ್ಮಿಆಯ್ಕೆಗೊಂಡಿದ್ದರು.

ಲೋಕಸಭಾ ಚುನಾವಣೆಯಲ್ಲಿ ಪರಸ್ಪರ ಸೆಣಸಾಡಲು  ಸಿದ್ಧವಾಗಿರುವಾಗಲೇ ಪೈವಳಿಕೆ ಪಂಚಾಯತ್‌ನಲ್ಲಿ ಎಲ್‌ಡಿಎಫ್‌ನ ಆಡಳಿತವನ್ನು ಉಳಿಸಲು ಯುಡಿಎಫ್ ಸಹಾಯವೊದಗಿಸುವುದೇ ಎಂದು ತಿಳಿಯಲು ಜನರು  ಕಾದುನಿಂತಿದ್ದಾರೆ.

RELATED NEWS

You cannot copy contents of this page