ಮೀಯಪದವಿನಲ್ಲಿ ಮನೆಬದಿ ಕುಸಿದು ಆವರಣಗೋಡೆಗೆ ಹಾನಿ: ಮನೆ ಅಪಾಯದಂಚಿನಲ್ಲಿ
ಮಂಜೇಶ್ವರ: ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಮೀಯಪದವು ವಿದ್ಯಾವರ್ಧಕ ಹೈಸ್ಕೂಲ್ ಹಿಂಭಾಗದಲ್ಲಿರುವ ಕೃಷಿಕ ಬಾಬು ಎಂಬವರ ಮನೆ ಬದಿಯ ಧರೆ ಕುಸಿದು ಬಿದ್ದಿದ್ದು ಯಾವುದೇ ಕ್ಷಣ ಮನೆ ಕುಸಿಯುವ ಭೀತಿ ನೆಲೆಗೊಂಡಿದೆ. ಸೋಮವಾರ ಮನೆ ಬಳಿಯ ಧರೆ ಕುಸಿದು ಬಿದ್ದಿದೆ. ಮನೆಯ ಆವರಣಗೋಡೆ ಕುಸಿದು ಹೋಗಿದ್ದು, ಅಡಿಪಾಯದ ತನಕ ತಲುಪಿದೆ. ಕುಟುಂಬವನ್ನು ಸ್ಥಳಾಂತರಗೊಳಿಸಲಾಗಿದೆ. ಇದೇ ವೇಳೆ ತೋಟದಲ್ಲಿರುವ ಬಾವಿ, ಮೋಟಾರು ಪಂಪ್ ಸಹಿತ ಅಡಿಕೆ ಕೃಷಿ, ತೆಂಗು, ರಬ್ಬರ್ ಕೃಷಿ ನಾಶಗೊಂಡಿದೆ. ಪರಿಸರದ ಹಲವು ವಿದ್ಯುತ್ ಕಂಬಗಳು ಹಾನಿಗೊಂಡಿವೆ.
ಸ್ಥಳಕ್ಕೆ ಮೀಂಜ ಪಂ. ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ, ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಅಸಿಸ್ಟೆಂಟ್ ಕಾರ್ಯದರ್ಶಿ ನಾರಾಯಣ, ವಾರ್ಡ್ ಪ್ರತಿನಿಧಿ ಕುಸುಮಾ ಮೋಹನ್, ವಿವಿಧ ಅಧಿಕಾರಿಗಳು ಸಂದರ್ಶಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಮೀಯಪದವು ಶಾಲೆಯ ಅಧ್ಯಾಪಕರು, ಸ್ಥಳೀಯರು ಭೇಟಿ ನೀಡಿದ್ದಾರೆ.