ರೆಡ್ ಅಲರ್ಟ್ ಮುಂದುವರಿಕೆ: ಜಿಲ್ಲೆಯಲ್ಲಿ ಪ್ರವಾಹಭೀತಿ; ಬೇವಿಂಜೆ ರಾಷ್ಟ್ರೀಯ ಹೆದ್ದಾರಿ ಬಳಿ ಸಹಿತ ಹಲವೆಡೆ ಭೂಕುಸಿತ, ವ್ಯಾಪಕ ನಾಶನಷ್ಟ: 15 ಕುಟುಂಬ ಸ್ಥಳಾಂತರ

ಕಾಸರಗೋಡು: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಜಿಲ್ಲೆಯ ಹಲವೆಡೆಗಳಲ್ಲಿ ಪ್ರವಾಹದ ಭೀತಿ ಸೃಷ್ಟಿಸಿದೆ. ಮಧೂರು ಪಂಚಾಯತ್‌ನ ಪಟ್ಲ, ಶಿರಿಬಾಗಿಲು ಮತ್ತು ಮಾಯಿಪ್ಪಾಡಿ ಮತ್ತಿತರ ಪ್ರದೇಶಗಳೆಲ್ಲಾ ಮಳೆನೀರಿನಿಂದ ಆವೃತವಾಗಿದೆ. ನೀರು ಮನೆಗಳಿಗೂ ಪ್ರವೇಶಿಸಿ ಪ್ರವಾಹದ ಭೀತಿ ಸೃಷ್ಟಿಸಿದೆ. ಪಟ್ಲದ ೧೫ ಕುಟುಂಬಗಳನ್ನು ಕಾಸರಗೋಡು ಅಗ್ನಿಶಾಮಕದಳ ನಿರಂತರವಾಗಿ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಆ ಪ್ರದೇಶದಿಂದ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿರಿಸಿದ್ದಾರೆ. ಅವರು ಸಂಬಂಧಿಕರ ಮನೆಯಲ್ಲಿ ಈಗ ಕಳೆಯುತ್ತಿದ್ದಾರೆ. ಶಿರಿಬಾಗಿಲಿನ ಬಹುತೇಕ ಪ್ರದೇಶಗಳಲ್ಲಿ ಮಳೆ ನೀರು ಆವರಿಸಿದೆ. ಇದರಿಂದಾಗಿ ಅಲ್ಲಿನ ಅಬ್ದುಲ್ಲ ಎಂಬವರ ಹಿತ್ತಿಲ ಗೋಡೆ ಕುಸಿದು ಬಿದ್ದಿದೆ.

ಮಧುವಾಹಿನಿ ಹೊಳೆ ಉಕ್ಕಿ ಹರಿಯುತ್ತಿದ್ದು, ಇದರಿಂದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ ಮತ್ತು ಪರಿಸರ  ಸಂಪೂರ್ಣವಾಗಿ ಜಲಾವೃತಗೊಂಡಿದೆ. ಜಡಿ ಮಳೆಗೆ ನಿನ್ನೆ ಮಾತ್ರ ಜಿಲ್ಲೆಯಲ್ಲಿ 21 ಮನೆಗಳು ಆಂಶಿಕವಾಗಿ ಕುಸಿದು ಬಿದ್ದಿವೆ. ಒಂದು ಮನೆ ಪೂರ್ಣವಾಗಿ ಕುಸಿದು ಬಿದ್ದಿದೆ. ಈ ಮೂಲಕ ಮಳೆಗಾಲಕ್ಕೆ ಕುಸಿದು ಬಿದ್ದ ಮನೆಗಳ ಸಂಖ್ಯೆ 40ಕ್ಕೇರಿದೆ. ಚೆರ್ಕಳ ಬೇವಿಂಜೆ ರಾಷ್ಟ್ರೀಯ ಹೆದ್ದಾರಿಯ ಬಳಿ ನಿರ್ಮಿಸಲಾಗಿದ್ದ ಸಿಮೆಂಟ್‌ನ ಗೋಡೆ ನಿನ್ನೆ ಕುಸಿದು ರಸ್ತೆಗೆ ಬಿದ್ದಿದೆ. ಆದರೆ ಆ ವೇಳೆ ಈ ರಸ್ತೆಯಲ್ಲಿ ಯಾವುದೇ ವಾಹನಗಳು ಹಾದು ಹೋಗದ ಕಾರಣದಿಂದ ಸಂಭಾವ್ಯ ದುರಂತ ತಪ್ಪಿಹೋಗಿದೆ. ಇದೇ ರೀತಿ ಜಿಲ್ಲೆಯ  ಹಲವೆಡೆಗಳಲ್ಲಿ ಭೂಕುಸಿತ ಸಂಭವಿಸಿದೆ. ಜಿಲ್ಲೆಯ ಹೆಚ್ಚಿನ ಎಲ್ಲಾ ನದಿಗಳು ಉಕ್ಕಿ ಹರಿಯತೊಡಗಿದೆ. ಇದರಿಂದಾಗಿ ಅದರ ಪರಿಸರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯಲ್ಲಿ  ಇಂದೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಶಿಕ್ಷಣ ಸಂಸ್ಥೆಗಳಿಗೂ ಇಂದು ರಜೆ ಸಾರಲಾಗಿದೆ. ತಗ್ಗು ಪ್ರದೇಶಗಳು ಮಳೆ ನೀರಿನಿಂದ ಆವೃತವಾಗಿದೆ.

ಕಾಸರಗೋಡು ರೈಲು ನಿಲ್ದಾಣದ ಒಂದನೇ ಪ್ಲಾಟ್‌ಫಾಂಗೆ ತಾಗಿ ನಿಂತಿರುವ ಗುಡ್ಡೆ ನಿನ್ನೆ ಕುಸಿದು ಬಿದ್ದಿದೆ. ಆದರೆ ಇದು ರೈಲು ಸೇವೆ ಮೇಲೆ ಪರಿಣಾಮ ಭೀರಿಲ್ಲ. ಕಾಸರಗೋಡು, ಮಂಜೇಶ್ವರ, ಹೊಸದುರ್ಗ ಮತ್ತು ವೆಳ್ಳರಿಕುಂಡ್ ತಾಲೂಕುಗಳ ಹಲವೆಡಗಳಲ್ಲಿ ಧಾರಾಕಾರ ಮಳೆಯಿಂದ ವ್ಯಾಪಕ ನಾಶನಷ್ಟ ಉಂಟಾಗಿದೆ. ಅಗ್ನಿಶಾಮಕ ದಳ ವಿಪತ್ತು ನಿರ್ವಹಣಾ ಪಡೆ ಹಾಗೂ ಪೊಲೀಸರನ್ನು ಎಲ್ಲದಕ್ಕೂ ಸರ್ವ ಸಿದ್ಧರನ್ನಾಗಿ ನೀಲ್ಲಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page