ಲೈಸನ್ಸ್ ಇಲ್ಲದೆ ಹಾವು ಹಿಡಿದಲ್ಲಿ ಕ್ರಮ- ಸಚಿವ

ತಿರುವನಂತಪುರ: ಲೈಸನ್ಸ್ ಇಲ್ಲದೆ ಹಾವುಗಳನ್ನು ಸೆರೆ ಹಿಡಿದಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಅರಣ್ಯ ಖಾತೆ ಸಚಿವ ವಿ.ಕೆ. ಶಶೀಂದ್ರನ್ ಹೇಳಿದ್ದಾರೆ. ಲೈಸನ್ಸ್ ಇಲ್ಲದೆ ಹಾವು ಹಿಡಿದಲ್ಲಿ 1972ರ ವನ್ಯಜೀವಿ ಸಂರಕ್ಷಣಾ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಹಾವು ಹಿಡಿಯುವ ವೈಜ್ಞಾನಿಕ ರೀತಿಯ ತರಬೇತಿ ಲಭಿಸಿದವರಿಗೆ  ಮಾತ್ರವೇ ಅರಣ್ಯ ಇಲಾಖೆ ಲೈಸನ್ಸ್ ನೀಡುತ್ತದೆ.

ತರಬೇತಿ ಪಡೆಯದೆ ಹಾಗೂ ಅರಣ್ಯ ಕಾನೂನು ಉಲ್ಲಂಘಿಸುವ ರೀತಿಯಲ್ಲಿ ಹಾವುಗಳನ್ನು ಸೆರೆ ಹಿಡಿಯುವುದು ಗಮನಕ್ಕೆ ಬಂದಲ್ಲಿ ಅದನ್ನು ತಿದ್ದುವಂತೆ ಜಿಲ್ಲಾ ಕೋರ್ಡಿನೇಟರ್ ಆಗಿರುವ ಅರಣ್ಯ ರೇಂಜ್ ಅಧಿಕಾರಿಯವರು ಮೊದಲು ಮುನ್ನೆಚ್ಚರಿಕೆ ನೀಡುವರು. ಅದಾಗ್ಯೂ ಮತ್ತೆ ಅದೇ ರೀತಿಯಲ್ಲಿ ಹಾವು ಹಿಡಿದಲ್ಲಿ ಅಂತಹ ವ್ಯಕ್ತಿಗಳಿಗೆ ನೀಡಲಾಗಿರುವ ಲೈಸನ್ಸ್‌ನ್ನು ರದ್ದುಪಡಿಸಲಾಗುವುದೆಂದೂ ಸಚಿವರು ತಿಳಿಸಿದ್ದಾರೆ.

You cannot copy contents of this page