ಹಾನಿಗೀಡಾದ ಯಂತ್ರ ದುರಸ್ತಿ ವೇಳೆ ಶಾಕ್ ತಗಲಿ ಯುವಕ ಮೃತ್ಯು

ಸೀತಾಂಗೋಳಿ: ಹಾನಿಗೀಡಾದ ವಾಟರ್ ಕಂಪ್ರೆಶರ್ ಮೆಶಿನ್ ದುರಸ್ತಿ ನಡೆಸುತ್ತಿದ್ದಾಗ ಯುವಕ ಶಾಕ್ ತಗಲಿ ಸಾವಿಗೀಡಾದ ಘಟನೆ ನಡೆದಿದೆ.

ಅನಂತಪುರ ಇನ್ಫ್ರಾ ಪಾರ್ಕ್‌ನಲ್ಲಿ ಕಾರ್ಯಾಚರಿಸುವ ಚಿಕನ್ ಪ್ರೋಟೀನ್ ಮಿಲ್‌ನಲ್ಲಿ ಈ ಘಟನೆ ನಡೆದಿದೆ. ಒಡಿಸ್ಸಾದ ಕಂದಮಾನ್ ನಿವಾಸಿ ಸುಜಿತ್ ಕುಮಾರ್ (32) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಮುಂಜಾನೆ 3.30ರ ವೇಳೆ ಈ ದುರ್ಘಟನೆ ಉಂಟಾಗಿದೆ. ಸುಜಿತ್ ರಾತ್ರಿ ಶಿಫ್ಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇಂದು ಮುಂಜಾನೆ ಕೆಲಸ ಮುಗಿದ ಬಳಿಕ ಯಂತ್ರವನ್ನು ಶುಚಿಗೊಳಿಸುತ್ತಿದ್ದ ಸುಜಿತ್ ಕುಮಾರ್ ಹಾನಿಗೀಡಾದ ವಾಟರ್ ಕಂಪ್ರೆಶರ್ ಯಂತ್ರವನ್ನು ದುರಸ್ತಿಗೊಳಿಸಲು ಪ್ರಯತ್ನಿಸಿದ್ದರು.  ಈ ವೇಳೆ ಅದರಿಂದ ವಿದ್ಯುತ್ ಶಾಕ್ ತಗಲಿ ಗಂಭೀರ ಅಸ್ವಸ್ಥಗೊಂಡ ಅವರನ್ನು ಕೂಡಲೇ ಕುಂಬಳೆ ಜಿಲ್ಲಾ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಸುಜಿತ್ ಕುಮಾರ್ ಆರು ತಿಂಗಳ ಹಿಂದೆ ಕಿನ್ಪ್ರಾ ಪಾರ್ಕ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಘಟನೆ ಬಗ್ಗೆ ಕುಂಬಳೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You cannot copy contents of this page