ಹೊಸಂಗಡಿಯಲ್ಲಿ ಬಿರುಗಾಳಿ: ವ್ಯಾಪಕ ಹಾನಿ

ಹೊಸಂಗಡಿ: ನಿನ್ನೆ ರಾತ್ರಿ ಬೀಸಿದ ಬಿರುಗಾಳಿಗೆ ಹೊಸಂಗಡಿ ಪರಿಸರದಲ್ಲಿ ವ್ಯಾಪಕ ಹಾನಿಯುಂಟಾಗಿದೆ. ಹೊಸಂಗಡಿ  ರೈಲ್ವೇ ಗೇಟ್ ತುಂಡಾಗಿ ಬಿದ್ದಿದೆ. ಹೊಸತಾಗಿ ನಿರ್ಮಿಸಿ ಇನ್ನಷ್ಟೇ ಉದ್ಘಾಟನೆಗೊಳ್ಳಬೇಕಿದ್ದ ರೈಲ್ವೇ ಗೇಟ್‌ನ ಮೇಲೆ ಮರದ ರೆಂಬೆ ಬಿದ್ದು, ಗೇಟ್ ಹಾನಿಯಾಗಿ ಕೆಳಗೆ ಬಿದ್ದಿದೆ.

ಇದೇ ಗೇಟ್‌ನ ಎದುರುಬದಿಯಲ್ಲಿ ಬೃಹತ್ ಮರವೊಂದು ಬಿದ್ದು ಸಿದ್ದಿಕ್ ಎಂಬವರ ಚಿಕನ್ ಮಾರಾಟದಂಗಡಿಗೆ ಹಾನಿಯಾಗಿದೆ. ಆನೆಕಲ್ಲು ಭಾಗಕ್ಕೆ ತೆರಳಲು ಬಸ್ ಕಾಯುವ ಬಸ್ ತಂಗುದಾಣದ ಬಳಿಯಲ್ಲಿ ಕಾರವಲ್ ಸಹಿತ ವವಿಧ ಪತ್ರಿಕೆಗಳ ಏಜೆಂಟ್ ಆಗಿದ್ದ ರಾಜ ಎಂಬವರ ಗೂಡಂ ಗಡಿಗೂ ಮರ ಬಿದ್ದು ಹಾನಿಯಾಗಿದೆ. ಇದರ ಮುಂಭಾಗದಲ್ಲಿದ್ದ ಸಂದೇಶ್ ಎಂಬವರ ಲಾಟರಿ ಮಾರಾಟದ ಗೂಡಂಗಡಿ ಗಾಳಿಗೆ ಚೆಲ್ಲಾಪಿಲ್ಲಿಯಾಗಿ ರಸ್ತೆಯಿಂದ ಕೆಳಗೆ ಬಿದ್ದಿದೆ.

ಇದರ ಅಲ್ಪ ಮುಂದೆ ಅಂಗಡಿಪದವಿನಲ್ಲಿ  ದೊಡ್ಡದೊಂದು ಮರ ಬುಡ ಸಹಿತ ಕುಸಿದು ಬಿದ್ದು ಭಾಗ್ಯಚಂದ್ರ ಎಂಬವರ  ವೆಲ್ಡಿಂಗ್  ಅಂಗಡಿಗೆ ಹಾನಿಯಾಗಿದ್ದು, ಸಮೀಪದಲ್ಲೇ ಇರುವಇವರ ಮನೆಗೂ ಹಾನಿ ಉಂಟಾಗಿದೆ.

ಇದೇ ರೀತಿ ಈ ಭಾಗದ ವಿವಿಧ ಕಡೆಗಳಲ್ಲಿ ವಿದ್ಯುತ್ ಕಂಬಗಳು ಧರಾಶಾಹಿಯಾಗಿದೆ.  ಹಲವು ಒಳರಸ್ತೆಗಳಲ್ಲೂ ಮರ, ಗೆಲ್ಲುಗಳು ಬಿದ್ದಿರುವ ಬಗ್ಗೆ ತಿಳಿದುಬಂದಿದೆ.

You cannot copy contents of this page