ಕೃಷಿಕನ ಕುತ್ತಿಗೆಯಿಂದ ಚಿನ್ನದ ಸರ ಅಪಹರಣ: ಆರೋಪಿಗಳಿಗಾಗಿ ಶೋಧ

ಉಪ್ಪಳ: ಕೃಷಿಕನ ಕುತ್ತಿಗೆಯಲ್ಲಿದ್ದ ಎರಡೂವರೆ ಪವನ್ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು   ಕಸಿದು ಪರಾರಿಯಾದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸುವಂತೆ  ಮಾಡಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಚೇವಾರು ಮಲೆನಾಡ ಹೆದ್ದಾರಿ ರಸ್ತೆಯ ಕಟ್ಟದಮನೆ ನಿವಾಸಿ ಗೋಪಾಲಕೃಷ್ಣ ಭಟ್ ಎಂಬವರ  ಕುತ್ತಿಗೆಯಿಂದ ಸರ ಅಪಹರಿಸಲಾಗಿದೆ.  ಶನಿವಾರ ಬೆಳಿಗ್ಗೆ  ಮನೆಯಿಂದ ಸುಮಾರು ೧೫೦ ಮೀಟರ್ ಅಂತರದಲ್ಲಿ ಘಟನೆ ನಡೆದಿದೆ. ಇವರು ಬೆಳಿಗ್ಗೆ ಮನೆಯಿಂದ  ನಡೆದು ರಸ್ತೆ ದಾಟಿ ತೋಟಕ್ಕೆ ತೆರಳುವ ರಸ್ತೆಗೆ ತಲುಪಿದಾಗ ಚೇವಾರು ಭಾಗದಿಂದ ಬೈಕ್‌ನಲ್ಲಿ ಇಬ್ಬರು ತಲುಪಿದ್ದಾರೆ. ಬೈಕ್‌ನ ಹಿಂಬದಿ ಸವಾರ ಇಳಿದು ಗೋಪಾಲಕೃಷ್ಣ ಭಟ್‌ರ ಬಳಿಗೆ ತಲುಪಿ ಕುತ್ತಿಗೆಯಲ್ಲಿದ್ದ ಸರವನ್ನು  ಕಸಿದಿದ್ದಾರೆ. ಬಳಿಕ ಓಡಿ ಬೈಕ್‌ಗೆ ಹತ್ತಿ ಇಬ್ಬರು ಮತ್ತೆ ಚೇವಾರು ಕಡೆಗೆ ಅಮಿತ ವೇಗದಲ್ಲಿ ಸಂಚರಿಸಿರುವುದಾಗಿ ದೂರಲಾಗಿದೆ. ಇಬ್ಬರು ಹೆಲ್ಮೆಟ್ ಧರಿಸಿರುವುದರಿಂದ ಗುರುತು ಪತ್ತೆಯಾಗಲಿಲ್ಲ.

ನಿನ್ನೆ ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆಗೆ ಚಾಲನೆ ನೀಡದ್ದಾರೆ.  ಗೋಪಾಲಕೃಷ್ಣ ಭಟ್‌ರ ಮನೆ ಬಳಿಯ ಗೇಟ್ ಬಳಿಯಿರುವ ಸಿಸಿ ಕ್ಯಾಮರಾದಲ್ಲಿ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ  ಪರಾರಿಯಾಗುವ ದೃಶ ಪತ್ತೆಯಾಗಿದೆ. ಆ ದೃಶ್ಯವನ್ನು ಪೊಲೀಸರು ಸಂಗ್ರಹಿಸಿಕೊಂಡು ಆ ವ್ಯಕ್ತಿಗಳು ಯಾರೆಂದು ತಿಳಿದು ಕ್ರ ಮ ಕೈಗೊಂಡಿದ್ದಾರೆ.

You cannot copy contents of this page