ಅವಯವ ದಾನಕ್ಕಾಗಿ ವಿದೇಶಕ್ಕೆ ಮಾನವ ಕಳ್ಳ ಸಾಗಾಟ: ತನಿಖೆ ಎನ್‌ಐಎಗೆ

ಕಾಸರಗೋಡು: ಅವಯವ ದಾನಕ್ಕಾಗಿ ವಿದೇಶಕ್ಕೆ ಮಾನವ ಕಳ್ಳಸಾಗಾಟ ನಡೆಸುತ್ತಿರುವ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಳ್ಳಲು ಮುಂದಾ ಗಿದೆ. ಈಗ ನೆಡುಂಬಾಶ್ಶೇರಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕೇರಳ, ಬೆಂಗಳೂರು, ಹೈದರಾಬಾದ್ ಎಂಬೆಡೆಗಳಿಂದಾಗಿ ಇಪ್ಪತ್ತರಷ್ಟು ಮಂದಿಯನ್ನು ಅವಯವದಾನಕ್ಕಾಗಿ ಮಾನವ ಕಳ್ಳಸಾಗಾಟದ ತಂಡದವರು ಇರಾನ್‌ಗೆ ಸಾಗಿಸಿರುವುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.

ಇರಾನ್‌ನ ಫರಿದಿಖಾನ್ ನಲ್ಲಿರುವ ಆಸ್ಪತ್ರೆಯೊಂದಕ್ಕೆ ಈ ಜಾಲದವರು ಮಾನವ ಅವಯವಗಳನ್ನು ಸಾಗಿಸುತ್ತಿದ್ದಾರೆ. ಈ ಮಾನವ ಕಳ್ಳಸಾಗಾಟ ಜಾಲದ ಪ್ರಧಾನ ಸೂತ್ರಧಾರನೆಂದು ಹೇಳಲಾಗುತ್ತಿರುವ ತೃಶೂರು ವಲಪಾಗತ್ ನಿವಾಸಿ ಸಾಬೀತ್ ನಾಸರ್ (30) ಎಂಬಾತನನ್ನು ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಿಂದ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಕಾಸರಗೋಡು, ಮಂಗಳೂರು, ಕೊಚ್ಚಿ, ರಾಂಚಿ, ಬೆಂಗಳೂರು, ಕೊಲ್ಕತ್ತಾ ಮತ್ತು ಜಮ್ಮು ನಿವಾಸಿಗಳಾದ ಹಲವರು ಈ ಜಾಲದ ಇತರ ಪ್ರಧಾನ ಕೊಂಡಿಗಳಾಗಿರುವ ಸ್ಪಷ್ಟ ಸೂಚನೆ ಪೊಲೀಸರಿಗೆ ಲಭಿಸಿದೆ. ಆ ಹಿನ್ನೆಲೆಯಲ್ಲಿ ಇದರ ತನಿಖೆಯನ್ನು ಪೊಲೀಸರು ಕಾಸರಗೋಡು, ಮಂಗ ಳೂರು ಮತ್ತಿತರೆಡೆಗಳಿಗೂ ವಿಸ್ತರಿಸಿದ್ದಾರೆ.

ಈ ಜಾಲದವರು ೨೦೧೯ರಲ್ಲೇ ಈ ದಂಧೆ ಆರಂಭಿಸಿದ್ದರು. ಅಂದಿನಿಂದಲೇ ಹಲವಾರು ಮಂದಿಯನ್ನು ಇವರು ಇರಾನ್‌ಗೆ ಸಾಗಿಸಿ ಅವರ ಅವಯವಗಳನ್ನು ತೆಗೆದು ಮಾರಾಟ ಮಾಡಿದ್ದರು. ಬಂಧಿತ ಆರೋಪಿ ಸಾಬೀತ್ ನಾಸರ್ ಈ ದಂಧೆಗಾಗಿ ೨೦೧೯ರಲ್ಲಿ ಇರಾನ್‌ಗೆ ಹೋಗಿದ್ದನು. ಅಲ್ಲಿಂದ ಆತ ಕಳೆದ ಶನಿವಾರ  ವಿಮಾನದಲ್ಲಿ ಕೊಚ್ಚಿ ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಕ್ಷಣ ಪೊಲೀಸರು ಆತನನ್ನು ಬಂಧಿಸಿದ್ದರು.

ಅವಯವ ನೀಡಲು ತಯಾರಾಗುವವರಿಗೆ ಈ ಜಾಲದವರು ಲಕ್ಷಾಂತರ ರೂ. ಭರವಸೆ ನೀಡಿ, ಅವರನ್ನು ಇರಾನ್‌ಗೆ ಸಾಗಿಸಿ ಅಲ್ಲಿನ ಆಸ್ಪತ್ರೆಯಲ್ಲಿ ಅವರ ದೇಹದ ಅವಯವಗಳನ್ನು ತೆಗೆದು ಮಾರಾಟ ಮಾಡುತ್ತಾರೆ. ಹೀಗೆ ಓರ್ವ ವ್ಯಕ್ತಿಯನ್ನು ಇರಾನ್‌ಗೆ ಸಾಗಿಸಿದ್ದಲ್ಲಿ ಈ ಜಾಲದವರಿಗೆ ೬೦ ಲಕ್ಷ ರೂ.ಗಿಂ ತಲೂ ಹೆಚ್ಚು ಹಣ ಲಭಿಸುತ್ತಿದೆ. ಹೊರ ರಾಜ್ಯಗಳಿಂದ ಕೇರಳಕ್ಕೆ ಕೆಲಸಕ್ಕಾಗಿ ಬಂದ ಹಲವು ವಲಸೆ ಕಾರ್ಮಿಕರನ್ನೂ ಈ ಜಾಲದವರು ಹಲವು ಆಮೀಷವೊಡ್ಡಿ ವಿದೇಶಕ್ಕೆ ಸಾಗಿಸಿ ಅವರ ಅವಯವಗಳನ್ನು ತೆಗೆಸಿರುವುದಾಗಿಯೂ ಪೊಲೀಸರು  ತನಿಖೆಯಲ್ಲಿ ಸ್ಪಷ್ಟಗೊಂಡಿದೆ.

ಇದು ಅಂತಾರಾಷ್ಟ್ರೀಯ ಸಂ ಬಂಧವಿರುವ ಪ್ರಕರಣವಾಗಿದ್ದು, ಆದ್ದರಿಂದಲೇ ಈ ಪ್ರಕರಣದ ತನಿಖೆಯನ್ನು ಎನ್‌ಐಎ ಈಗ ವಹಿಸಲು ಮುಂದಾಗಿರುವುದರ ಪ್ರಧಾನ ಹಿನ್ನೆಲೆಯಾಗಿದೆ.

Leave a Reply

Your email address will not be published. Required fields are marked *

You cannot copy content of this page