ಆವರಿಸಿದ ಯುದ್ಧದ ಕಾರ್ಮೋಡ: ಜನರ ಭದ್ರತೆ ಖಾತರಿಪಡಿಸುವುದೇ ನಾಳೆ ದೇಶಾದ್ಯಂತ ನಡೆಸುವ  ಅಣಕು ಕವಾಯತಿನ ಪ್ರಧಾನ ಉದ್ದೇಶ

ನವದೆಹಲಿ:  ಕಾಶ್ಮೀರದಲ್ಲಿ ಪಾಕಿಸ್ತಾನಿ ಉಗ್ರರು ನಡೆಸಿದ ದಾಳಿಯು ಯುದ್ಧದ ಕಾರ್ಮೋಡ ಆವರಿಸುವಂತೆ ಮಾಡಿದೆ. ಅದಕ್ಕಿರುವ ಒಂದು ಪೂರ್ವ ಸಿದ್ಧತೆ ಎಂಬಂತೆ ನಾಳೆ ದೇಶದ ಎಲ್ಲಾ ರಾಜ್ಯಗಳಲ್ಲಿ ಅಣಕು ಕವಾಯತ್ (ಮ್ಯಾಕ್‌ಡ್ರಿಲ್) ನಡೆಸಲು ಕೇಂದ್ರ ಸರಕಾರ ಸೂಚನೆ ನೀಡಿದೆ. ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ನಾಗರಿಕರನ್ನು ರಕ್ಷಿಸಲು ಪರಿಣಾಮಕಾರಿ ಸನ್ನದ್ಧತೆ ಮತ್ತು ಪ್ರಕ್ರಿಯೆ ವಿಧಾನಗಳು ಜ್ಯಾರಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಕವಾಯತ್ ಹೊಂದಿದೆ.

ನಾಳೆ ಇದ್ದಕ್ಕಿದ್ದಂತೆಯೇ ಜೋರಾದ ಹಾಗೂ ಭಯಾನಕ ಸೈರನ್ ಶಬ್ದ ಕೇಳಿ ಬರಬಹುದು. ಹಾಗೆ ನಡೆದಲ್ಲಿ ಜನರು ಭಯ ಪಡಬೇಕಾಗಿಲ್ಲ. ಇದು ತುರ್ತು ಪರಿಸ್ಥಿತಿಯ ಸಂಕೇತವಲ್ಲ. ಬದಲಿಗೆ ಅಣಕು ಕವಾಯತು ಮಾತ್ರವಾಗಿದೆ.  ಇದರ ಉದ್ದೇಶವು ಯುದ್ಧ ಅಥವಾ ವಾಯು ದಾಳಿಗಳಂತಹ ತುರ್ತು ಸಂದರ್ಭಗಳಿಗೆ ಜನರನ್ನು ಸಿದ್ಧಪಡಿಸುವುದಲ್ಲ. ಬದಲಿಗೆ ಇಂತಹ ಸಂದರ್ಭದಲ್ಲಿ ಯುದ್ಧ ಸೈರನ್ ಶಬ್ದವು ಜನರಿಗೆ ತುರ್ತು ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬುವುದನ್ನು ತಿಳಿಸುತ್ತದೆ. 1971ರ ಭಾರತ- ಪಾಕಿಸ್ತಾನ ಯುದ್ಧದ ನಂತರ ಭಾರತ ಸರಕಾರ ಇಂತಹ ಅಣಕು ಕವಾಯತಿಗೆ ಆದೇಶಿಸಿದ್ದು ಇದೇ  ಮೊದಲ ಬಾರಿಯಾಗಿದೆ. ಯುದ್ಧ ಸೈರನ್ ಒಂದು ದೊಡ್ಡ ಎಚ್ಚರಿಕೆಯ ವ್ಯವಸ್ಥೆಯಾಗಿದ್ದು, ಯುದ್ಧ, ವಾಯುದಾಳಿ ಅಥವಾ ವಿಪತ್ತಿನಂತಹ ತುರ್ತು ಸಂದರ್ಭಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತದೆ. ಇದರ ಶಬ್ದವು ಸಾಮಾನ್ಯ ಹಾರ್ನ್, ಆಂಬುಲೆನ್ಸ್ ಅಥವಾ ಅಗ್ನಿಶಾಮಕ ವಾಹನಗಳ ಸೈರನ್‌ಗಳಿಗಿಂತ ಭಿನ್ನವಾಗಿರುತ್ತದೆ. ಇದು ನಿರಂತರವಾಗಿ ಏರಿಳಿತಗೊಳ್ಳುವ ಧ್ವನಿ ಹೊಂದಿದ್ದು, ಜನರ ಗಮನವನ್ನೂ ತಕ್ಷಣ ಸೆಳೆಯುತ್ತದೆ. ಆಡಳಿತ ಕಟ್ಟಡಗಳು, ಪೊಲೀಸ್ ಪ್ರಧಾನ ಕಚೇರಿಗಳು, ಅಗ್ನಿಶಾಮಕ ಠಾಣೆಗಳು, ಮಿಲಿಟರಿ ನೆಲೆಗಳು, ವಾಣಿಜ್ಯ ಕೇಂದ್ರಗಳು, ಮಾರುಕಟ್ಟೆಗಳು, ಜನದಟ್ಟಣೆಯ ನಗರ ಪ್ರದೇಶಗಳು, ದೇಶದ ಮತ್ತು ರಾಜ್ಯಗಳ ರಾಜಧಾನಿಗಳು ಎಂಬೆಡೆಗಳ ಎತ್ತರದ ಸ್ಥಾನದಲ್ಲಿ ಈ ಸೈರನ್‌ಗಳನ್ನು  ಅಳವಡಿಸಲಾಗುತ್ತಿದೆ. ವಿಶೇಷವಾಗಿ ಗಡಿಗೆ ಸಮೀಪದ ಅಥವಾ ರಾಜತಾಂತ್ರಿಕವಾಗಿ ಮಹತ್ತರ ಸ್ಥಳಗಳಲ್ಲಿಯೂ ಇದಕ್ಕೆ ಹೆಚ್ಚಿನ ಸ್ಥಾನ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page