ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು-ಲಾರಿ ಢಿಕ್ಕಿ: ಯುವತಿ ಸಾವಿನಿಂದ ಶೋಕಸಾಗರ

ಉಪ್ಪಳ: ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ವಾಹನ ಅಪಘಾತದಲ್ಲಿ ಯುವತಿಯೋರ್ವೆ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.

ಮಂಗಳೂರು ಪಡೀಲ್ ಅಳಕ್ಕೆ ನಿವಾಸಿ ಪದ್ಮನಾಭ ಆಚಾರ್ಯರ ಪತ್ನಿ ನವ್ಯ (34) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಅಪಘಾತದಲ್ಲಿ ಪದ್ಮನಾಭ ಆಚಾರ್ಯ ಹಾಗೂ ಪುತ್ರ ಗಯಾನ್ ಗಾಯಗೊಂಡಿದ್ದಾರೆ. ಈ ಮೂವರು ಸಂಚರಿಸುತ್ತಿದ್ದ ಕಾರಿಗೆ ಮೀನು ಸಾಗಾಟ ಲಾರಿಢಿಕ್ಕಿ ಹೊಡೆದು  ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ಈ ಮೂವರನ್ನು ಕೂಡಲೇ ದೇರಳಕಟ್ಟೆಯ ಆಸ್ಪತ್ರೆಗೆ ತಲುಪಿಸಿದ್ದು ಅಷ್ಟರೊಳಗೆ ನವ್ಯ ಮೃತಪಟ್ಟಿದ್ದಾರೆ. ಪದ್ಮನಾಭ ಆಚಾರ್ಯರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪುತ್ರ ಗಯಾನ್ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾನೆ.

ನವ್ಯ ವರ್ಕಾಡಿ ಕೋಳ್ಯೂರು ಪದವಿನ ಶಿವರಾಮ ಆಚಾರ್ಯ- ಮೀನಾಕ್ಷಿ ದಂಪತಿಯ ಪುತ್ರಿ ಯಾಗಿದ್ದಾರೆ. ಅವರು ಪುತ್ರನೊಂದಿಗೆ ತಾಯಿ ಮನೆಗೆ ಬಂದಿದ್ದರು. ನಿನ್ನೆ ಬೆಳಿಗ್ಗೆ ಪದ್ಮನಾಭ ಆಚಾರ್ಯ ಅಲ್ಲಿಗೆ ಬಂದು  ಕಾರಿನಲ್ಲಿ ಪತ್ನಿ ಹಾಗೂ ಪುತ್ರನೊಂದಿಗೆ ಉಪ್ಪಳ ಪೇಟೆಗೆ ತೆರಳಿದ್ದರು. ಅಲ್ಲಿಂದ ಮರಳಿ ಕೋಳ್ಯೂರುಪದವಿಗೆ ತೆರಳುತ್ತಿದ್ದಾಗ ಮಧ್ಯಾಹ್ನ 1.30ರ ವೇಳೆ ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರು ಸಂಚರಿಸುತ್ತಿದ್ದ ಕಾರಿಗೆ ಮೀನು ಸಾಗಾಟ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಯೆಂದು ತಿಳಿದುಬಂದಿದೆ. ಅಪಘಾತದ ಆಘಾತದಿಂದ ಕಾರು ನಜ್ಜುಗುಜ್ಜಾಗಿದೆ. ಅಲ್ಲದೆ ಲಾರಿ ಮಗುಚಿ ಬಿದ್ದಿದೆ. ಅಪಘಾತ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಮೃತ ನವ್ಯ ಪತಿ, ಪುತ್ರ, ತಂದೆ, ತಾಯಿ, ಸಹೋದರ ಸಂತೋಷ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಅಶೋಕ ಈ ಹಿಂದೆ ನಿಧನ ಹೊಂದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page