ಎನ್ಐಎ ದಾಳಿಯಲ್ಲಿ ಹಲವು ನಿರ್ಣಾಯಕ ಪುರಾವೆಗಳು ಪತ್ತೆ; ಓರ್ವ ಕಸ್ಟಡಿಗೆ
ಕಾಸರಗೋಡು: ದೆಹಲಿ ಕೇಂದ್ರೀಕರಿಸಿ ಉಗ್ರಗಾಮಿ ಸಂಘಟನೆಗಳಿಗೆ ಯುವಕರನ್ನು ಸೇರ್ಪಡೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಂಜೇಶ್ವರದ ಕುರುಡಪದವು ಮತ್ತು ಬೇಡಡ್ಕಕ್ಕೆ ಸಮೀಪದ ಪಡಿಪ್ಪುನಲ್ಲಿ ನಿನ್ನೆ ನಡೆಸಿದ ದಾಳಿಯಲ್ಲಿ ಹಲವು ನಿರ್ಣಾಯಕ ಪುರಾವೆಗಳನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ.
ಇದಕ್ಕೆ ಸಂಬಂಧಿಸಿ ಎನ್ಐಎ ಓರ್ವನನ್ನು ವಶಕ್ಕೆ ತೆಗೆದುಕೊಂಡಿದೆ. ಕುರುಡಪದವು ಮತ್ತು ಪಡುಪು ಎಂಬೆಡೆಗಳಲ್ಲಾಗಿ ಎರಡು ಮನೆಗಳಲ್ಲಿ ಎನ್ಐಎ ತಪಾಸಣೆ ನಡೆಸಿದ್ದು, ಇದರಲ್ಲಿ ಈ ಎರಡು ಮನೆಗಳಿಂದಾಗಿ ಮೊಬೈಲ್ ಫೋನ್, ಪೆನ್ಡ್ರೈವ್, ಸಿಮ್ ಕಾರ್ಡ್ಗಳು, ಆಧಾರ್ ಕಾರ್ಡ್ ಇತ್ಯಾದಿಗಳನ್ನು ಎನ್ಐಎ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ಮಾತ್ರವಲ್ಲ ಪಡಿಪ್ಪಿನ ಟ್ರಾವೆಲ್ ಏಜೆನ್ಸಿಯೊಂದನ್ನು ನಡೆಸುತ್ತಿರುವ ವ್ಯಕ್ತಿಯನ್ನು ಎನ್ಐಎ ಕಸ್ಟಡಿಗೆ ತೆಗೆದುಕೊಂಡಿದೆ. ಈತನ ಮನೆ ಮತ್ತು ಟ್ರಾವೆಲ್ ಏಜೆನ್ಸಿ ಸಂಸ್ಥೆಯಲ್ಲೂ ಎನ್ಐಎ ಶೋಧ ನಡೆಸಿದೆ. ನಿನ್ನೆ ಬೆಳಿಗ್ಗೆ ಆರಂಭಗೊಂಡ ಈ ದಾಳಿ ಮಧ್ಯಾಹ್ನದ ತನಕ ಮುಂದುವರಿದಿದೆ. ಬೆಂಗಳೂರನ್ನು ಕೇಂದ್ರೀಕರಿಸಿ ಈ ಹಿಂದೆ ನಡೆದ ಹವಾಲಾ ಹಣ ಜಾಲದೊಂದಿಗೆ ಈ ಪ್ರಕರಣ ನಂಟು ಹೊಂದಿದೆಯೇ ಎಂಬ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ.