ಕಾಸರಗೋಡು ಗಿಡ್ಡ ತಳಿ ದನಗಳನ್ನು ರಾಜ್ಯದ ಸ್ವಂತ ಹಸುಗಳನ್ನಾಗಿ ಅಂಗೀಕರಿಸಬೇಕಾಗಿದೆ- ಸಚಿವೆ
ನೀರ್ಚಾಲು: ಕಾಸರಗೋಡಿನ ಗಿಡ್ಡ ತಳಿಗೆ ಸೇರಿದ ಹಸುಗಳನ್ನು ರಾಜ್ಯದ ಸ್ವಂತ ಹಸುಗಳನ್ನಾಗಿ ಅಂಗೀಕರಿಸಬೇಕಾ ಗಿದೆ ಎಂದು ರಾಜ್ಯ ಪಶು ಸಂಗೋಪನಾ ಮತ್ತು ಹೈನುಗಾರಿಕಾ ಖಾತೆ ಸಚಿವೆ ಜೆ. ಚಿಂಜುರಾಣಿ ಹೇಳಿದ್ದಾರೆ. ಬೇಳದ ಗಿಡ್ಡ ತಳಿ ಫಾಂನಲ್ಲಿ ನೂತನವಾಗಿ ನಿರ್ಮಿಸಲಾದ ಆಡಳಿತ ವಿಭಾಗದ ಕಟ್ಟಡವನ್ನು ನಿನ್ನೆ ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು.
ಈ ಕೇಂದ್ರದಲ್ಲಿ ೧೦೦೦ದಷ್ಟು ಗಿಡ್ಡ ಹಸುಗಳನ್ನು ಸಂರಕ್ಷಿಸಲು ಸಾಧ್ಯವಾದರೆ, ಇಂತಹ ಗಿಡ್ಡ ತಳಿಯ ಹಸುಗಳನ್ನು ರಾಜ್ಯದ ಸ್ವಂತ ಹಸುಗಳನ್ನಾಗಿ ಅಂಗೀಕರಿಸಲು ಸಾಧ್ಯವಾಗಲಿದೆ. ಜ್ಯಾರಿಯಲ್ಲಿ ವೆಚ್ಚೂರ್ ತಳಿಗೆ ಸೇರಿದ ಹಸುಗಳನ್ನು ಮಾತ್ರವೇ ರಾಜ್ಯದ ಸ್ವಂತ ಹಸುಗಳನ್ನಾಗಿ ಅಂಗೀಕರಿಸಲಾಗಿದೆ. ರಾಜ್ಯದಲ್ಲಿ ಈಗ ಇರುವ ದನಗಳ ಪೈಕಿ ಶೇ. ೯೫ರಷ್ಟು ಮಿಶ್ರತಳಿಗೆ ಸೇರಿದ ವುಗಳಾಗಿವೆ. ಇಂತಹ ಸಂದರ್ಭದಲ್ಲಿ ಊರ ಹಸುಗಳ ಪ್ರಾಧಾನ್ಯತೆ ಹೆಚ್ಚುತ್ತಿದೆ. ಬೇಳದ ಕಲ್ಲು ಪ್ರದೇಶಗಳಲ್ಲಿ ದನಗಳಿಗೆ ಅಗತ್ಯದ ಹುಲ್ಲುಗಳನ್ನು ಬೆಳೆಸಿ ಉಪಯೋಗಿಸಲು ಈ ಫಾಂನವರು ತಯಾರಾಗಬೇಕು. ಅತ್ಯುತ್ತಮ ಪೋಷಕಾಂಶ ಹೊಂದಿರುವ ಹುಲ್ಲುಗಳನ್ನು ಹೆಚ್ಚು ಬೆಳೆಸಿ ನೀಡಿದಲ್ಲಿ ಹಸುಗಳಲ್ಲಿ ಹಾಲು ಉತ್ಪಾದನೆ ಹೆಚ್ಚಿಸಬಹುದಾಗಿದೆ. ಇದಕ್ಕೆ ತಯಾರಾಗಬೇಕೆಂದು ಸಚಿವರು ಇದೇ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ.
ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಶು ಸಂಗೋಪನಾ ಅಧಿಕಾರಿ ಡಾ. ಪಿ.ಕೆ. ಮನೋಜ್ ಕುಮಾರ್ ವರದಿ ಮಂಡಿಸಿದರು. ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಂ. ಸಜಿತ್ ಕುಮಾರ್, ಕಟ್ಟಡ ನಿರ್ಮಾಣದ ವರದಿ ಮಂಡಿಸಿದರು. ಬದಿಯಡ್ಕ ಪಂ. ಅಧ್ಯಕ್ಷೆ ಬಿ. ಶಾಂತ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಪಂ. ಉಪಾಧ್ಯಕ್ಷ ಎಂ. ಅಬ್ಬಾಸ್, ಕೆ.ಪಿ. ಸ್ವಪ್ನ, ಅಬ್ದುಲ್ ರಹ್ಮಾನ್, ಡಾ|ವಿ.ಪಿ. ಪ್ರದೀಪ್ ಕುಮಾರ್, ಬಿ.ಎಂ. ಸುಬೈರ್, ಪಿ. ಸುಧಾಕರ, ಶ್ಯಾಮ್ ಪ್ರಸಾದ್, ಇ. ಚಂದ್ರಬಾಬು ಮತ್ತು ಡಾ. ಪಿ. ಪ್ರಶಾಂತ್ ಮೊದಲಾದವರು ಮಾತನಾಡಿದರು.