ಕಾಸರಗೋಡು ನಗರಸಭಾ ಕಚೇರಿಗೆ ವಿಜಿಲೆನ್ಸ್ ದಾಳಿ: 37.21 ಲಕ್ಷ ರೂ.ಗಳ ಅವ್ಯವಹಾರ ಪತ್ತೆ

ಕಾಸರಗೋಡು: ಕಾಸರಗೋಡು ನಗರಸಭಾ ಕಚೇರಿಗೆ ವಿಜಿಲೆನ್ಸ್ ನಿನ್ನೆ  ನಡೆಸಿದ ಮಿಂಚಿನ ದಾಳಿ ಮತ್ತು ಪರಿಶೀಲನೆಯಲ್ಲಿ  ಆರ್ಥಿಕ ಅವ್ಯವಹಾರ ಪತ್ತೆಹಚ್ಚಿದ್ದಾರೆ.

ವಿವಿಧ ಅಗತ್ಯಗಳಿಗಾಗಿ 2020-25ರ ಅವಧಿಯಲ್ಲಿ ಸಿಬ್ಬಂದಿಗಳಿಗೆ ಮುಂಗಡವಾಗಿ ಮಂಜೂರು ಮಾಡಲಾದ 37,21,088 ರೂಪಾಯಿಗಳ ಸರಿಯಾದ ಬಿಲ್‌ಗಳನ್ನು ಹಾಜರುಪಡಿಸದೆ ಹಾಗೂ ಆ ಮೊತ್ತಕ್ಕೆ ನಿಗದಿತ ಬಡ್ಡಿ ಪಾವತಿಸದೆ ಅದರಲ್ಲಿ ಅವ್ಯವಹಾರ ನಡೆಸಲಾಗಿದೆಯೆಂದು ಪರಿಶೀಲನೆಯಲ್ಲಿ ಪತ್ತೆಹಚ್ಚಲಾಗಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ನಗರಸಭಾ ಕಚೇರಿಯ ತುರ್ತು ಅಗತ್ಯಗಳನ್ನು ನೆರವೇರಿಸಲು ಆ ಕಚೇರಿಯಿಂದ ಸಾಧಾರಣ ವಾಗಿ ಮುಂಗಡ ಹಣ ನೀಡಲಾಗುತ್ತದೆ. ಹೀಗೆ ನೀಡಲಾಗುವ ಹಣವನ್ನು ಮೂರು ತಿಂಗಳೊಳಗೆ ಮರು ಪಾವತಿಸಬೇಕಾಗಿದೆ. ಮಾತ್ರವಲ್ಲ ಅದನ್ನು  ವೆಚ್ಚ ಮಾಡಿದುದರ ಬಿಲ್‌ಗಳನ್ನು ನಗರಸಭಾ ಕಚೇರಿಯಲ್ಲಿ ಹಾಜರುಪಡಿಸಬೇಕೆಂಬ ಕಾನೂನು ನಿಬಂಧನೆ ಇದೆ.  ಹೀಗೆ ನಿಗದಿತ ಸಮಯ ವ್ಯಾಪ್ತಿಯೊಳಗೆ ಹಣ ಮರುಪಾವತಿಸದಿದ್ದಲ್ಲಿ ಅದನ್ನು ಶೇ. ೧೮ರಷ್ಟು ಬಡ್ಡಿ ಸಹಿತ  ಮರುಪಾವತಿಸಬೇಕಾಗಿದೆಯೆಂಬ ನಿಬಂಧನೆಯೂ ಇದೆ.

೨೦೧೯ರಿಂದ ಸಿಬ್ಬಂದಿಗಳಿಗೆ ನೀಡಲಾದ ಮುಂಗಡ ಹಣದ ವತಿಯಿಂದ ೧೫ ಲಕ್ಷದಷ್ಟು ರೂಪಾಯಿಗಳನ್ನು ಮರುಪಾವತಿಸಲಾಗಿಲ್ಲ. ಮಾತ್ರವಲ್ಲ ಅದರ ಬಿಲ್ಲುಗಳನ್ನು ಹಾಜರುಪಡಿಸದೆ ಅವ್ಯವಹಾರ ನಡೆದಿದೆಯೆಂಬ  ದೂರು ವಿಜಿಲೆನ್ಸ್‌ಗೆ ಲಭಿಸಿತ್ತು. ಅದರ ಆಧಾರದಲ್ಲಿ ವಿಜಿಲೆನ್ಸ್ ತಂಡ ನಗರಸಭಾ ಕಚೇರಿಗೆ ಮಿಂಜಿನ ದಾಳಿ  ಮತ್ತು ಪರಿಶೀಲನೆ ನಡೆಸಿದೆ. ನಿನ್ನೆ ಬೆಳಿಗ್ಗೆ 11 ಗಂಟೆಗೆ ಆರಂಭಗೊಂಡ ವಿಜಿಲೆನ್ಸ್ ಪರಿಶೀಲನೆ ಸಂಜೆ 4 ಗಂಟೆ ತನಕ ಮುಂದುವರಿದೆ.

Leave a Reply

Your email address will not be published. Required fields are marked *

You cannot copy content of this page