ಕುಂಬಳೆಯಲ್ಲಿ ಯುವಕನಿಗೆ ಇರಿತ: ಕೊಲೆ ಪ್ರಕರಣದ ಆರೋಪಿ ಬಂಧನ

ಕುಂಬಳೆ:  ಕುಂಬಳೆಯಲ್ಲಿ ನಿನ್ನೆ ಸಂಜೆ ಯುವಕನೋರ್ವ ಇರಿತದಿಂದ ಗಾಯಗೊಂಡಿದ್ದು, ಈ ಸಂಬಂಧ ಕೊಲೆ ಪ್ರಕರಣದ ಆರೋಪಿಯನ್ನು   ಪೊಲೀಸರು ಬಂಧಿಸಿದ್ದಾರೆ.  ಪೆರುವಾಡು ಫಿಶರೀಸ್ ಕಾಲನಿ ನಿವಾಸಿಯೂ ಈಗ ಬಂಬ್ರಾಣದಲ್ಲಿ ವಾಸಿಸುವ ನಿಯಾಸ್ (೩೦) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ನಿನ್ನೆ ಸಂಜೆ  ಚಳಿಯಂಗೋಡು ಮೈಮೂನ್ ನಗರದ  ಶಾಹುಲ್ ಹಮೀದ್ ಯಾನೆ ಶಾನು(೨೮)  ಎಂಬವರಿಗೆ ನಿಯಾಸ್ ಇರಿದು ಗಾಯಗೊಳಿಸಿ ದ್ದಾನೆ. ಕುಂಬಳೆ-ಬದಿಯಡ್ಕ ರಸ್ತೆಯ ಗ್ಯಾರೇಜೊಂದರ ಸಮೀಪ ನಿಂತಿದ್ದ ಶಾಹುಲ್ ಹಮೀದ್‌ರ ಬಳಿಗೆ ಬಂದ ನಿಯಾಸ್ ಬಿಯರ್ ಬಾಟ್ಲಿಯಿಂದ ಶಾಹುಲ್ ಹಮೀದ್‌ರ ತಲೆಗೆ ಹೊಡೆದು ತುಂಡರಿಸಿ ಬಳಿಕ ಸೊಂಟದ ಭಾಗಕ್ಕೆ ಇರಿದು ಪರಾರಿಯಾಗಿದ್ದನು. ಇರಿತದಿಂದ ಗಾಯಗೊಂಡ ಶಾಹುಲ್ ಹಮೀದ್‌ರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖ ಲಿಸಲಾಗಿದೆ. ವಿಷಯ ತಿಳಿದ ಕುಂಬಳೆ  ಎಸ್‌ಐ ವಿ.ಕೆ. ಅನೀಶ್ ನೇತೃತ್ವದ ಪೊಲೀಸರು ತಕ್ಷಣ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಶಾಂತಿಪಳ್ಳದಿಂದ ಸೆರೆಹಿಡಿದಿದ್ದಾರೆ.  ಸೆರೆಗೀಡಾದ ನಿಯಾಸ್ ೨೦೧೭ರಲ್ಲಿ ಬದ್ರಿಯಾ ನಗರ ಕೋಟೆಯ ಅಬ್ದುಲ್ ಸಲಾಂ ಎಂಬವರ ಕುತ್ತಿಗೆ ಕೊಯ್ದು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದಾ ನೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page