ಕುಂಬಳೆ- ಕಂಚಿಕಟ್ಟೆ- ಕೋಟೆಕಾರು ನಾಯ್ಕಾಪು ರಸ್ತೆಯಲ್ಲಿ ಅಪಾಯ ಭೀತಿ
ಕುಂಬಳೆ: ಕುಂಬಳೆಯಿಂದ ಕಂಚಿಕಟ್ಟೆ ಕೋಟೆಕಾರು ಮೂಲಕ ನಾಯ್ಕಾಪುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಪಾಯಕಾರಿಯಾಗಿ ಪರಿಣಮಿಸಿದೆ. ದಿನನಿತ್ಯ ನೂರಾರು ಕುಟುಂಬಗಳು ಸಂಚರಿಸುವ ಈ ಪಿಡಬ್ಲ್ಯುಡಿ ರಸ್ತೆಯತ್ತ ಅಧಿಕಾರಿಗಳು ಮಾತ್ರ ಕಣ್ಣೆತ್ತಿಯೂ ನೋಡುತ್ತಿಲ್ಲ. ಅದರ ಪರಿಣಾಮವಾಗಿಯೇ ಈ ಸ್ಥಿತಿ ಉಂಟಾಗಿದೆ ಎಂದು ನಾಗರಿಕರು ತಿಳಿಸುತ್ತಿದ್ದಾರೆ. ಕಳೆದ ಬೇಸಿಗೆ ಕಾಲದಲ್ಲೇ ರಸ್ತೆಯ ವಿವಿಧೆಡೆ ಕುಸಿಯಲಾರಂಭಿಸಿತ್ತು. ಇತ್ತೀಚೆಗೆ ಸುರಿದ ಧಾರಾಕಾರ ಮಳೆಯ ನೀರಿನ ರಭಸಕ್ಕೆ ರಸ್ತೆ ಮತ್ತಷ್ಟು ಕುಸಿದಿದೆ. ಅಗಲ ಕಿರಿದಾದ ರಸ್ತೆಯ ಬದಿ ಕುಸಿಯತೊಡಗಿರುವುದು ವಾಹನ ಚಾಲಕರು ಹಾಗೂ ಪ್ರಯಾಣಿಕರಿಗೆ ತೀವ್ರ ಆತಂಕ ಮೂಡಿಸುತ್ತಿದೆ.
ಕುಂಬಳೆ ಪಂಚಾಯತ್ನ 10ನೇ ವಾರ್ಡ್ ಇಚ್ಲಂಪಾಡಿ ಹಾಗೂ ೧೨ನೇ ವಾರ್ಡ್ ಕೋಟೆಕಾರಿನ ಗಡಿ ಪ್ರದೇಶದ ಸುಮಾರು ಅರ್ಧ ಕಿಲೋ ಮೀಟರ್ ರಸ್ತೆ ಕುಸಿದಿದೆ. ರಸ್ತೆಯ ದುರಸ್ತಿ ಶೀಘ್ರ ನಡೆಯದಿದ್ದಲ್ಲಿ ಅಪಾಯ ಸಾಧ್ಯತೆಯಿದ್ದು, ಆದ್ದರಿಂದ ಅಲ್ಲಿ ಸೂಚನಾ ಫಲಕವನ್ನಾದರೂ ಸ್ಥಾಪಿಸಬೇಕೆಂದು ನಾಗರಿಕರು ತಿಳಿಸುತ್ತಿದ್ದಾರೆ. ಈ ರಸ್ತೆಯ ಶೋಚನೀಯ ಸ್ಥಿತಿಯನ್ನು ತಿಳಿಸಿ ನಾಗರಿಕರು ಶಾಸಕ ಎಕೆಎಂ ಅಶ್ರಫ್ರಿಗೆ ಮನವಿ ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೊಸ ರಸ್ತೆ ನಿರ್ಮಿಸುವ ಭರವಸೆ ನೀಡಿದ್ದರೆಂದು ನಾಗರಿಕರು ತಿಳಿಸುತ್ತಿದ್ದಾರೆ. ಆದರೆ ರಸ್ತೆಯ ಅಭಿವೃದ್ಧಿಗೆ ಯಾವುದೇ ಕ್ರಮ ನಡೆದಿಲ್ಲ. ಮಳೆ ತೀವ್ರಗೊಳ್ಳುವುದರೊಂದಿಗೆ ಈ ರಸ್ತೆ ಇನ್ನಷ್ಟು ಅಪಾಯಕಾರಿಯಾಗಿ ಪರಿಣಮಿಸಲಿದೆ. ಆದ್ದರಿಂದ ಅಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.