ಕುಟುಂಬ ಆದಾಯ ಎರಡು ಲಕ್ಷ ರೂ. ಮೀರಿದಲ್ಲಿ ಆಶ್ರಿತ ನೇಮಕಾತಿ ಇಲ್ಲ
ತಿರುವನಂತಪುರ: ವಾರ್ಷಿಕ ಕುಟುಂಬ ಆದಾಯ ಎಂಟು ಲಕ್ಷ ರೂ. ಮೀರಿದಲ್ಲಿ ಅಂತಹ ಕುಟುಂಬ ಸದಸ್ಯರಿಗೆ ಆಶ್ರಿತ ನೇಮಕಾತಿ ನೀಡದಿರುವ ರೀತಿಯಲ್ಲಿ ಆಶ್ರಿತ ನೇಮಕಾತಿ ವ್ಯವಸ್ಥೆಯಲ್ಲಿ ಅಗತ್ಯದ ಬದಲಾವಣೆ ತರಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸರಕಾರಿ ಸಿಬ್ಬಂದಿಗಳು ನಿವೃತ್ತಿ ಸಮಯದೊಳಗಾಗಿ ಸಾವನ್ನಪ್ಪಿದಲ್ಲಿ ಅವರ ಕುಟುಂಬದ ೧೩ ವರ್ಷಕ್ಕಿಂತ ಮೇಲ್ಪಟ್ಟ ಯಾವುದಾದರೊಂದು ಸದಸ್ಯರಿಗೆ ಸರಕಾರಿ ಹುದ್ದೆ ನೀಡುವ ಆಶ್ರಿತ ನೇಮಕಾತಿ ಸಂಪ್ರದಾಯ ಈಗ ರಾಜ್ಯದಲ್ಲಿದೆ. ಆದರೆ ಅನುದಾನಿತ ಸಂಸ್ಥೆಗಳಲ್ಲಿ ಇಂತಹ ಸವಲತ್ತು ಇಲ್ಲ. ವಿವಾಹಿತರಾದ ಸರಕಾರಿ ಸಿಬ್ಬಂದಿಗಳು ತಮ್ಮ ಸೇವಾ ಅವಧಿಯಲ್ಲಿ ಸಾವನ್ನಪ್ಪಿದರೆ ಅವರ ಪತ್ನಿ/ಪತಿ, ಮಗ, ಮಗಳು ದತ್ತು ಸ್ವೀಕರಿಸಿದ ಮಗ ಅಥವಾ ಮಗಳನ್ನು ಆಶ್ರಿತ ನೇಮಕಾತಿಗಾಗಿ ಪರಿಗಣಿಸಲಾಗುತ್ತಿದೆ. ಇನ್ನು ಅವಿವಾಹಿತ ಸಿಬ್ಬಂದಿ ಸೇವಾ ಅವಧಿಯಲ್ಲಿ ಸಾವನ್ನಪ್ಪಿದಲ್ಲಿ ಅವರ ತಂದೆ, ತಾಯಿ ಅಥವಾ ಅವರ ಅವಿವಾಹಿತರಾದ ಸಹೋದರ ಅಥವಾ ಸಹೋದರಿಯನ್ನು ಈ ನೇಮಕಾತಿಗಾಗಿ ಪರಿಗಣಿಸಲಾಗುತ್ತಿದೆ. ಇದರಲ್ಲಿ ಆದ್ಯತೆ ಪತಿ ಅಥವಾ ಪತ್ನಿಗೆ ನೀಡಲಾಗುತ್ತಿದೆ.
ಸರಕಾರಿ ಸೇವೆಯಲ್ಲಿರುವ ಸಿಬ್ಬಂದಿ ಸೇವಾ ಅವಧಿಯಲ್ಲಿ ಸಾವನ್ನಪ್ಪಿದಲ್ಲಿ ಅವರಿಗೆ ವಿವಾಹಿತರಾದ ಮಗ ಅಥವಾ ಮಗಳು ಇದ್ದಲ್ಲಿ ಅಂತಹವರು ನಾವು ತಂದೆಯ ಆದಾಯವನ್ನೇ ಆಶ್ರಯಿಸಿ ಜೀವಿಸುವವರಾಗಿದ್ದೇವೆ ಎಂಬುವುದನ್ನು ಖಾತರಿ ಪಡಿಸಲು ಸಂಬಂಧ ಪಟ್ಟ ತಹಶೀಲ್ದಾರರಿಂದ ಸರ್ಟಿಫಿಕೇಟ್ ಪಡೆದು ಅದನ್ನು ಹಾಜರುಪಡಿಸಬೇಕು. ವಿವಾಹ ವಿಚ್ಛೇಧನಗೊಂಡ ಸರಕಾರಿ ಸಿಬ್ಬಂದಿಗಳು ಸೇವಾ ಅವಧಿಯಲ್ಲಿ ಸಾವನ್ನಪ್ಪಿದ್ದಲ್ಲಿ ಅವರ ಮಗ, ಮಗಳು ಅಥವಾ ದತ್ತು ಪುತ್ರ ಯಾ ದತ್ತು ಪುತ್ರಿಗೆ ಆಶ್ರಿತ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು. ಇನ್ನು ಪುನರ್ ವಿವಾಹವಾಗುವ ಸಿಬ್ಬಂದಿಗಳ ವಿಷಯದಲ್ಲಿ ಅಂತಹವರ ಮೊದಲ ಮದುವೆಯಿಂದ ಜನಿಸಿದ ಮಕ್ಕಳಿಗೆ ಆಶ್ರಿತ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು.