ಕೃಷಿ ಪರಿಪಾಲನೆ ಯೋಜನೆಯಲ್ಲಿ ಆರ್ಥಿಕ ಅವ್ಯವಹಾರ ಪ್ರಕರಣ: ಕಾಸರಗೋಡಿನ ನಿವೃತ್ತ ಕೃಷಿ ಸಹ ನಿರ್ದೇಶಕರಿಗೆ 37 ವರ್ಷ ಸಜೆ, 15 ಲಕ್ಷ ರೂ. ಜುಲ್ಮಾನೆ
ಕಾಸರಗೋಡು: ಕೃಷ್ಯುತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಗುರುತಿಸಲು ರಾಜ್ಯ ಸರಕಾರ ಮಂಜೂರು ಮಾಡಿದ ಹಣದಲ್ಲಿ ಆರ್ಥಿಕ ಅವ್ಯವಹಾರ ನಡೆಸಿದ ಪ್ರಕರಣದಲ್ಲಿ ಕಾಸರಗೋಡು ಪ್ರಿನ್ಸಿಪಲ್ ಕೃಷಿ ಕಚೇರಿಯ ನಿವೃತ್ತ ಸಹಾಯಕ ನಿರ್ದೇಶಕ ಕಲ್ಲಿಕೋಟೆ ಫಾರೂಕ್ ಪೇಟ್ಟಾ ಪುನಿಯಾಲ್ ಹೌಸ್ನ ಎಂ. ಅಬ್ದುಲ್ ರಹೀಂ (66)ರಿಗೆ ತಲಶ್ಶೇರಿ ವಿಜಿಲೆನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ರಾಮಕೃಷ್ಣನ್ರವರು ವಿವಿಧ ಸೆಕ್ಷನ್ಗಳಲ್ಲಾಗಿ ಒಟ್ಟು 37 ವರ್ಷ ಸಜೆ ಹಾಗೂ 15 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.
ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಇದರಿಂದ ಆರೋಪಿ 10 ವರ್ಷ ಶಿಕ್ಷೆ ಅನುಭವಿಸಬೇಕಾಗಿ ಬರಲಿದೆ. ಶಿಕ್ಷೆಗೊಳಗಾದ ಆರೋಪಿಯನ್ನು ನಂತರ ಕಣ್ಣೂರು ಸೆಂಟ್ರಲ್ ಜೈಲಿಗೆ ಸಾಗಿಸಲಾಗಿದೆ.
ಕೃಷಿ ಪರಿಪಾಲನೆ ಯೋಜನೆ ಪ್ರಕಾರ ರಾಜ್ಯ ಸರಕಾರ ಮಂಜೂರು ಮಾಡಿದ್ದ 16.75 ಲಕ್ಷ ರೂ.ನಲ್ಲಿ 7.17 ಲಕ್ಷ ರೂ.ವನ್ನು ವಾಹನ ಖರೀದಿಗಾಗಿ ಉಪಯೋಗಿಸಲಾಗಿತ್ತು. ಬಾಕಿ 9.4 ಲಕ್ಷ ರೂ.ವನ್ನು ಹಿಂಪಡೆದು ಅದನ್ನು ದುರುಪಯೋಗಪಡಿಸಿದ ಆರೋಪದಂತೆ ಕಾಸರಗೋಡು ವಿಜಿಲೆನ್ಸ್ ಘಟಕ ಪ್ರಕರಣ ದಾಖಲಿಸಿತ್ತು. ಆ ಬಗ್ಗೆ ಅಂದು ಕಾಸರಗೋಡು ವಿಜಿಲೆನ್ಸ್ ಡಿವೈಎಸ್ಪಿಯಾಗಿದ್ದ ಕೆ.ವಿ. ರಘುರಾಮನ್ ತನಿಖೆ ನಡೆಸಿ ತಲಶ್ಶೇರಿ ವಿಜಿಲೆನ್ಸ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ.
ಆರೋಪಿ ಅಬ್ದುಲ್ ರಹೀಂ ಕಾಸರಗೋಡು ಪ್ರಿನ್ಸಿಪಲ್ ಕೃಷಿ ಕಚೇರಿಯ ಸಹ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಅವರು 2004ರಿಂದ 2008ರ ತನಕದ ಅವಧಿಯಲ್ಲಿ ಕಾಸರಗೋಡು ಕೃಷ್ಯುತ್ಪನ್ನ ದಾಸ್ತಾನು ಮತ್ತು ವಿತರಣೆ ಸೊಸೈಟಿಯ ಜಂಟಿ ಖಾತೆಯಿಂದ ಅದರ ಕಾರ್ಯದರ್ಶಿಯ ಔದ್ಯೋಗಿಕ ಹುದ್ದೆಯ ಅಧಿಕಾರ ವಹಿಸಿ ಈ ಹಣ ಹಿಂಪಡೆದಿದ್ದರೆAದೂ ಅದಕ್ಕಾಗಿ ಆರೋಪಿ ಪ್ರಸ್ತುತ ಸೊಸೈಟಿಯ ಅಧಕ್ಷ ಮತ್ತು ಕೋಶಾಧಿಕಾರಿಯ ನಕಲಿ ಸಹಿಯನ್ನು ಹಾಕಿದ್ದನೆಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್ ಶೀಟ್ನಲ್ಲಿ ಆರೋಪಿಸಲಾಗಿತ್ತು.