ಕೋಟೂರಿನಲ್ಲಿ ಬಸ್-ಬೈಕ್ ಢಿಕ್ಕಿ ಹೊಡೆದು ತಲೆಹೊರೆ ಕಾರ್ಮಿಕ ದಾರುಣ ಮೃತ್ಯು

ಮುಳ್ಳೇರಿಯ: ಕೋಟೂರಿನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ವಾಹನ ಅಪಘಾತದಲ್ಲಿ  ತಲೆಹೊರೆ ಕಾರ್ಮಿಕನಾದ ಯುವಕ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಬಸ್ ಹಾಗೂ ಬೈಕ್ ಢಿಕ್ಕಿ ಹೊಡೆದು ಈ ಅಪಘಾತವುಂಟಾಗಿದೆ. ಬೈಕ್ ಸವಾರನಾದ ರಾಜಪುರಂ ಬಳಿಯ ಕೊಟ್ಟೋಡಿ ಪುದಿಯ ಕಾಲನಿ ಪಯ್ಯಾರತ್ತ್ ವೀಡ್‌ನ ಪಿ. ಕಾರ್ತಿಕ್ (೪೩) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಬೆಳಿಗ್ಗೆ ೮.೪೫ರ ವೇಳೆ ಇವರು ಸಂಚರಿಸುತ್ತಿದ್ದ ಬೈಕ್ ಹಾಗೂ ಬಸ್ ಢಿಕ್ಕಿ ಹೊಡೆದು ಅಪಘಾತ  ಸಂಭವಿಸಿದೆ. ಕಾನತ್ತೂರು ಭಾಗದಿಂದ ಆಗಮಿಸಿದ ಬೈಕ್ ಕೋಟೂರು ರಾಜ್ಯ ರಸ್ತೆಗೆ ಪ್ರವೇಶಿಸುತ್ತಿದ್ದಂತೆ ಅಪಘಾತವುಂಟಾಗಿದೆ. ಅಪಘಾತದಿಂದ ಗಂಭೀರ ಗಾಯಗೊಂಡ ಕಾರ್ತಿಕ್ ತಕ್ಷಣ ಮೃತಪಟ್ಟಿದ್ದಾರೆ. ಕಾರ್ತಿಕ್ ಚೆರ್ಕಳ ಕೆ.ಕೆ. ಪುರದಲ್ಲಿರುವ ಸಿಮೆಂಟ್ ಗೋಡೌನ್‌ನಲ್ಲಿ ತಲೆಹೊರೆ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಇಂದು ಬೆಳಿಗ್ಗೆ ಕೆಲಸ ಸ್ಥಳಕ್ಕೆ ತೆರಳಲೆಂದು ಆಗಮಿಸುತ್ತಿದ್ದಾಗ ಈ ಅಪಘಾತವುಂಟಾಗಿದೆ ಎನ್ನಲಾಗುತ್ತಿದೆ.

ಮೂಲತಃ ತಮಿಳುನಾಡು ಸೇಲಂ ನಿವಾಸಿಯಾದ ಪುಲವೇಂದ್ರ ಎಂಬವರ ಪುತ್ರನಾದ ಕಾರ್ತಿಕ್ ಕಳೆದ ೧೫ ವರ್ಷಗಳಿಂದ ಕೊಟ್ಟೋಡಿ ಪುದಿಯ ಕಾಲನಿಯಲ್ಲಿ ವಾಸಿಸುತ್ತಿದ್ದಾರೆ. ಈ ಹಿಂದೆ ನೀಲೇಶ್ವರದಲ್ಲೂ ತಲೆಹೊರೆ ಕಾರ್ಮಿಕನಾಗಿ ಕೆಲಸ ನಿರ್ವಹಿಸಿದ್ದರು.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಮೃತರು ಪತ್ನಿ ಜಾನಕಿ, ಮಕ್ಕಳಾದ ರಾಹುಲ್, ಗೋಕುಲ್, ಸೊಸೆ ಸಜಿನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page