ಕ.ಸಾ.ಪದಿಂದ ಸೀತಾಂಗೋಳಿಯಲ್ಲಿ ಕೃಷ್ಣರಾಜ ಒಡೆಯರ 141ನೇ ಜನ್ಮದಿನಾಚರಣೆ

ಸೀತಾಂಗೋಳಿ: ಮೈಸೂರು ಸಂಸ್ಥಾನ ಸರ್ವಾಂಗೀಣ ಪ್ರಗತಿ ಹೊಂದಲು,ವಿಶ್ವಮಾನ್ಯವಾಗಲು ಕಾರಣೀಭೂತರಾದವರು ನಾಲ್ವಡಿ ಕೃಷ್ಣರಾಜ ಒಡೆಯರು. ಅವರು ಕರುನಾಡಿನ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ಧೀಮಂತ ವ್ಯಕ್ತಿ.ಒಡೆಯರ ಆಳ್ವಿಕೆಯು ಮೈಸೂರು ಸಂಸ್ಥಾನದ ಸುವರ್ಣ ಯುಗವಾಗಿತ್ತು ಎಂದು ನ್ಯಾಯವಾದಿ, ಸಾಹಿತಿ ಥೋಮಸ್ ಡಿ’ಸೋಜ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಸೀತಾಂಗೋಳಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ 141ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿ, ಸಮಾಜಮುಖಿ ಚಿಂತನೆಗಳು ಎಲ್ಲರಿಗೂ ಮಾದರಿ ಹಾಗೂ ಪ್ರೇರಣೀಯವಾದುದು ಎಂದು ಥೋಮಸ್ ಡಿ’ಸೋಜ ಹೇಳಿದರು. ಕ.ಸಾ.ಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ ವಿದ್ಯಾವಾಣಿ ಮಠದಮೂಲೆ ಶುಭಾಶಂಸನೆ ಮಾಡಿದರು. ಕಾಸರಗೋಡು ಬ್ಲೋಕ್ ಪಂಚಾಯತು ಸದಸ್ಯ ಸುಕುಮಾರ ಕುದ್ರೆಪ್ಪಾಡಿ,ಕ.ಸಾ.ಪ ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಭಟ್ ಧರ್ಮತ್ತಡ್ಕ, ಪ್ರೇಮಶರಧಿ ಉಪಸ್ಥಿತರಿದ್ದರು.
ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿ, ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು. ಸಂಘಟನಾ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.

RELATED NEWS

You cannot copy contents of this page