ಗಂಟಲಲ್ಲಿ ಪೊರೋಟಾ ಸಿಲುಕಿ ಯುವಕ ಸಾವು
ಕಾಸರಗೋಡು: ಪೊರೋಟಾ ಗಂಟಲಲ್ಲಿ ಸಿಲುಕಿ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ಪೆರಿಯ ಪೆರಿಯೋಕಿಯ ದಿ| ಕುಂಞಿರಾಮನ್ರ ಪುತ್ರ ಶಿನೋಜ್ (41) ಸಾವನ್ನಪ್ಪಿದ ಯುವಕ. ಕಣ್ಣೂರಿನ ಎಳೆಯಾವೂರ್ ವೈದ್ಯರ್ ಪೀಡಿಗೆಯಿಲ್ನಲ್ಲಿರುವ ಎಂಪರರ್ ಎಂಬ ಹೆಸರಿನ ಹೋಟೆಲ್ನಲ್ಲಿ ಕಾರ್ಮಿಕನಾಗಿರುವ ಶಿನೋಜ್ ನಿನ್ನೆ ಬೆಳಿಗ್ಗೆ ಆ ಹೋಟೆಲ್ನ ವಾಸಸ್ಥಳದ ಶೌಚಾಲಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರೂ ಅದು ಫಲಕಾರಿ ಯಾಗದೆ ಅವರು ಸಾವನ್ನಪ್ಪಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದಾಗ ಗಂಟಲಲ್ಲಿ ಪರೋಟಾ ಸಿಲುಕಿ ಅದರಿಂದ ಉಸಿರುಗಟ್ಟಿ ಅವರು ಸಾವನ್ನಪ್ಪಿದ್ದಾರೆಂದು ಸ್ಪಷ್ಟಗೊಂಡಿದೆ.
ಮೃತದೇಹವನ್ನು ಬಳಿಕ ಪೆರಿಯಾದಲ್ಲಿರುವ ಮನೆಗೆ ತಂದು ಅಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾ ಯಿತು. ಮೃತರು ತಾಯಿ ಓಮನ, ಪತ್ನಿ ಸುಮ, ಪುತ್ರಿ ಶ್ರೀಯಾನಿ, ಸಹೋದರ ಮನೋಜ್ ಮತ್ತು ಸಹೋದರಿ ರೇವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.