ಗಡಿ ಪ್ರದೇಶಗಳಲ್ಲಿ ವ್ಯಾಪಕ ತಪಾಸಣೆ: ಅನಧಿಕೃತ ಸಾಗಾಟದ 650 ಲೀಟರ್ ಡೀಸೆಲ್ ವಶ
ಮಂಜೇಶ್ವರ: ಕರ್ನಾಟಕದಿಂದ ಪಿಕ್ಅಪ್ ವಾಹನದಲ್ಲಿ ಮಂಜೇಶ್ವರ ಭಾಗಕ್ಕೆ ಅನಧಿಕೃತವಾಗಿ ಸಾಗಿಸುತ್ತಿದ್ದ ೬೫೦ ಲೀಟರ್ ಡೀಸೆಲ್ ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಿನ್ನೆ ಸಂಜೆ ಮಂಜೇಶ್ವರ ಸಿ.ಐ. ಕೆ. ರಾಜೀವ್ ಕುಮಾರ್ ನೇತೃತ್ವದಲ್ಲಿ ಗಡಿ ಪ್ರದೇಶವಾದ ಬಾಕ್ರಬೈಲಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಡೀಸೆಲ್ ಸಾಗಾಟ ಪತ್ತೆಹಚ್ಚಲಾಗಿದೆ. ಸುಮಾರು ೨೦ರಷ್ಟು ಕ್ಯಾನ್ಗಳಲ್ಲಿ ಡೀಸೆಲ್ ತುಂಬಿಸಿಡಲಾಗಿತ್ತು. ಅದನ್ನು ಬಳಿಕ ಮಾರಾಟ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಅದಕ್ಕೆ ೭೦ ಸಾವಿರ ರೂಪಾಯಿ ದಂಡ ವಸೂಲು ಮಾಡಿ ಅದರ ಸಾಗಾಟಗಾರರಿಗೆ ಬಿಟ್ಟುಕೊಡಲಾಯಿತು. ಕರ್ನಾಟಕದಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಕೇರಳಕ್ಕಿಂತ ಕಡಿಮೆ ಬೆಲೆಗೆ ಲಭಿಸುತ್ತಿದೆ. ಇದರಿಂದ ಡೀಸೆಲ್, ಪೆಟ್ರೋಲ್ ತಂದು ಮಾರಾಟಗೈಯ್ಯುತ್ತಿರುವುದಾಗಿ ಹೇಳಲಾಗುತ್ತಿದೆ.
ಲೋಕಸಭಾ ಚುನಾವಣೆ ಸಂಬಂಧ ಕಾರ್ಯಾಚರಣೆ ಅಂಗವಾಗಿ ಗಡಿ ಪ್ರದೇಶಗಳಲ್ಲಿ ಮಂಜೇಶ್ವರ ಪೊಲೀಸರ ನೇತೃತ್ವದಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.
ಗಡಿ ಪ್ರದೇಶವಾದ ಅನೆಕಲ್ಲು, ಮುಳಿಗದ್ದೆ, ಬೆರಿಪದವು, ಬಾಕ್ರಬೈಲು, ತಲಪಾಡಿ ಮೊದಲಾದೆಡೆಗಳಲ್ಲಿ ಪೊಲೀಸರು ಮಾತ್ರವಲ್ಲದೆ ಚುನಾವಣೆ ಸಂಬಂಧ ನೇಮಕಾತಿ ನಡೆಸಿದ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದಾರೆ.