ಚಿನ್ನಾಭರಣಕ್ಕಾಗಿ ತಾಯಿಗೆ ಹಲ್ಲೆಗೈದು ಕೊಲೆ : ಸ್ವಾಭಾವಿಕ ಸಾವೆಂದು ತಿಳಿಸಿದ ಪುತ್ರ ಸೆರೆ

ಕಲ್ಲಿಕೋಟೆ: ಪೇರಂಬ್ರ ಕೂತಾಳಿಯಲ್ಲಿ ಗೃಹಿಣಿಯೋರ್ವೆಯ ಸಾವು ಕೊಲೆ ಕೃತ್ಯವೆಂದು ಪೊಲೀಸರು ತಿಳಿಸಿದ್ದಾರೆ. ಕೂತಾಳಿ ನಿವಾಸಿ ಹಾಗೂ ೬೫ರ ಹರೆಯದ ಪದ್ಮಾವತಿ ಅಮ್ಮರನ್ನು ಪುತ್ರ ಲಿಜೀಶ್ ಕೊಲೆಗೈದಿರುವುದಾಗಿ ಪತ್ತೆಹಚ್ಚಲಾಗಿದೆ. ಪ್ರಕರಣದಲ್ಲಿ ಲಿಜೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪೇರಂಬ್ರ ಪೂತಾಳಿಯಲ್ಲಿ ಈ ತಿಂಗಳ ೫ರಂದು ಪದ್ಮಾವತಿ ಅಮ್ಮ ಮೃತಪಟ್ಟಿದ್ದರು. ಪ್ರಜ್ಞಾಹೀನೆಯಾಗಿ ಮಲಗಿರುವುದನ್ನು ಕಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು ಎಂದು ಅಂದು ಆರೋಪಿ ತಿಳಿಸಿದ್ದನು. ಪೇರಂಬ್ರ ಎಂ.ಇ.ಎಸ್. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಕಲ್ಲಿಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಪದ್ಮಾವತಿ ಅಮ್ಮ ನಿಧನ ಹೊಂದಿದ್ದರು. ಸಾವಿನಲ್ಲಿ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದರು. ಮರಣೋತ್ತರ ಪರೀಕ್ಷೆ ವರದಿ ಲಭಿಸಿದ ಬಳಿಕ ಪುರಾವೆಗಳ ಸಹಿತ ಆರೋಪಿಯನ್ನು ಪೊಲೀಸರು ಪ್ರಶ್ನಿಸುತ್ತಿದ್ದಾಗ ಸಾವು ಕೊಲೆ ಕೃತ್ಯವೆಂಬುದು ದೃಢೀಕೃತಗೊಂಡಿದೆ. ಮದ್ಯಪಾನಗೈದು ತಲುಪಿದ ಆರೋಪಿ ಚಿನ್ನಾಭರ ಣಕ್ಕೆ ಸಂಬಂಧಿಸಿದ ತರ್ಕದ ಮಧ್ಯೆ ತಾಯಿಗೆ ಕ್ರೂರವಾಗಿ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡಿದ್ದರು. ಹಲ್ಲೆಯಿಂದ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಆಂತರಿಕ ರಕ್ತಸ್ರಾವದಿಂದಾಗಿ ಸಾವು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೈಜ್ಞಾನಿಕವಾದ ಪುರಾವೆಗಳ ಆಧಾರದಲ್ಲಿ ಪೊಲೀಸರು ನಡೆಸಿದ ತನಿಖೆಯಿಂದ ಸಾವು ಕೊಲೆ ಎಂದು ಪತ್ತೆಯಾಗಿರುವುದಾಗಿ ಡಿವೈಎಸ್‌ಪಿ ಎನ್. ಸುನಿಲ್ ಕುಮಾರ್ ತಿಳಿಸಿದ್ದಾರೆ.

You cannot copy contents of this page