ಜೆಸಿಬಿ ಆಪರೇಟರ್ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ನೀರ್ಚಾಲು: ಜೆಸಿಬಿ ಆಪರೇಟರ್ ಬಾಡಿಗೆ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕರ್ನಾಟಕದ ಸುಳ್ಯ ಪೆರಾಜೆ ನಿಧಿಮಲೆ ನಿವಾಸಿಯಾದ ಟಿ.ಎನ್. ಕುಮಾರ್ (26) ಸಾವಿಗೀಡಾದ ವ್ಯಕ್ತಿ. ಪಾಡ್ಲಡ್ಕ ನಿಡುಗಳದಲ್ಲಿರುವ ಮನೆಯಲ್ಲಿ ಇವರು ನೇಣುಬಿಗಿದು ಸಾವಿಗೀಡಾಗಿದ್ದಾರೆ. ನಿನ್ನೆ ಸಂಜೆ ಕೆಲಸ ಮುಗಿಸಿ ವಾಸಸ್ಥಳಕ್ಕೆ ತಲುಪಿದ್ದರೆನ್ನಲಾಗಿದೆ. ಅನಂತರ ಓರ್ವ ಸ್ನೇಹಿತ ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ಬರಲಿಲ್ಲ. ಹಲವು ಬಾರಿ ಕರೆ ಮಾಡಿದರೂ ಫೋನ್ ಎತ್ತದಿರುವುದರಿಂದ ಸಂಶಯಗೊಂಡು ಸ್ನೇಹಿತ ಮನೆಗೆ ತೆರಳಿ ನೋಡಿದಾಗ ಅಡುಗೆ ಕೋಣೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಕುಮಾರ್ ಪತ್ತೆಯಾಗಿದ್ದಾರೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತಲುಪಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಜೆಸಿಬಿ ಮಾಲಕ ಎನ್. ಮಹೇಶ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾರಾಯಣ-ಜಯಂತಿ ದಂಪತಿಯ ಪುತ್ರನಾದ ಕುಮಾರ್ ಸಹೋದರಿ ಸುಮಿತ್ರಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.