ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಇಬ್ಬರು ಮಕ್ಕಳು ಮೃತ್ಯು

ಇಡುಕ್ಕಿ: ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ಕುಮಳಿ ಸಮೀಪ ಸಂಭವಿಸಿದೆ. ವಂಡನ್‌ಮೇಡ್ ರಾಜಕ್ಕಂಡಂ ನಾಯರ್ ಸಿಟಿ ಚೆಂಬರ್‌ಶೇರಿಯ ಕನಕಾಧರನ್ (೫೭), ಮಕ್ಕಳಾದ ವಿಷ್ಣು (೩೧), ವಿನೀತ್ (೨೪) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ನಿನ್ನೆ ಅಪರಾಹ್ನ ೩ ಗಂಟೆ ವೇಳೆ ದುರ್ಘಟನೆ ಸಂಭವಿಸಿದೆ. ಅಪರಾಹ್ನ ಉಂಟಾದ ಗಾಳಿ ಮಳೆ ವೇಳೆ ಏಲಕ್ಕಿ ತೋಟದಲ್ಲಿ ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಮಳೆ ನಿಂತ ಬಳಿಕ ಹುಲ್ಲು ತರಲೆಂದು ಕನಕಾಧರನ್ ಗದ್ದೆಯತ್ತ  ತೆರಳಿದ್ದಾರೆ. ದೀರ್ಘ ಹೊತ್ತಾದರೂ ಅವರು ಮರಳಿ ಬಾರದ ಹಿನ್ನೆಲೆಯಲ್ಲಿ ಮಕ್ಕಳಾದ ವಿಷ್ಣು ಗೂ ವಿನೀತ್ ಹುಡುಕಿ ತೆರಳಿದ್ದಾರೆ. ಆದರೆ ಅವರೂ ಮರಳಿ ಬಂದಿಲ್ಲ. ಇದರಿಂದ ತಾಯಿ ಓಮನ ಹುಡುಕಿ ಗದ್ದೆಯತ್ತ ತೆರಳಿದಾಗ ಮೂವರೂ ಶಾಕ್ ತಗಲಿ ಬಿದ್ದಿರುವುದು ಕಂಡುಬಂದಿದೆ.  ಅದನ್ನು ಕಂಡ ಓಮನರ ಬೊಬ್ಬೆ ಕೇಳಿ ತಲುಪಿದ ನಾಗರಿಕರು ಕೆಎಸ್‌ಇಬಿ ಅಧಿಕಾರಿ ಗಳಿಗೆ ವಿಷಯ ತಿಳಿಸಿದ್ದು, ವಿದ್ಯುತ್ ವಿಚ್ಛೇಧಿಸಿದ ಬಳಿಕ ಮೂವರನ್ನೂ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ರಕ್ಷಿಸಲಾಗಲಿಲ್ಲ.

RELATED NEWS

You cannot copy contents of this page