ದೇರಂಬಳ ಸೇತುವೆ ಕುಸಿದು ಬಿದ್ದು ವರ್ಷ ಅನೇಕ ಕಳೆದರೂ ನಿರ್ಮಾಣಕ್ಕೆ ಕ್ರಮವಿಲ್ಲ: ಸ್ಥಳೀಯರಿಗೆ ಸಂಕಷ್ಟ

ಉಪ್ಪಳ: ದೇರಂಬಳದಲ್ಲಿ ಸೇತುವೆ ಕುಸಿದು ಬಿದ್ದು ಹಲವು ವರ್ಷಗಳು ಕಳೆದರೂ ಮರು ನಿರ್ಮಾಣಕ್ಕೆ ಅಧಿಕಾರಿಗಳು ಕ್ರಮಕೈಗೊಳ್ಳದೆ ಇರುವುದು ಊರವರಿಗೆ ಸಮಸ್ಯೆ ಸೃಷ್ಟಿಸಿದೆ. ಮಂಗಲ್ಪಾಡಿ, ಮೀಂಜ ಪಂಚಾಯತ್ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು ಈಗ ಸಂಚಾರ ದುಸ್ತರವಾಗಿದೆ. ದೇರಂಬಳ, ಚಿಗುರುಪಾದೆ, ಬುಡ್ರಿಯ, ಕಲ್ಲಗದ್ದೆ, ತೊಟ್ಟೆತ್ತೋಡಿ, ಬೇಕೂರು, ಪೈವಳಿಕೆ, ಜೋಡುಕಲ್ಲು, ಮಡಂದೂರು ಮೊದಲಾದ ಪ್ರದೇಶಗಳ ಜನರಿಗೆ ಅತ್ತಿತ್ತ ಸಂಚರಿಸಲು ಸಂಪರ್ಕ ಸೇತುವೆ ಇದಾಗಿತ್ತು. ಆದರೆ ಈಗ ಈ ಪ್ರದೇಶಗಳಿಗೆ ಕಿಲೋ ಮೀಟರ್ ಸುತ್ತು ವರಿದು ಬಾಯಿಕಟ್ಟೆ, ಕಳಾಯಿ ರಸ್ತೆ ಮೂಲಕ ಸಾಗಬೇಕಿದೆ. ಮುರಿದು ಬಿದ್ದ ಸೇತುವೆಯನ್ನು ಮರು ನಿರ್ಮಾಣ ಮಾಡಿಕೊಡಬೇಕೆಂದು ಊರವರ ಬೇಡಿಕೆ ಇನ್ನೂ ಈಡೇರಲೇ ಇಲ್ಲ. ಸೇತುವೆ ಕುಸಿದು ವರ್ಷಗಳು ಸಂದರೂ ಆಡಳಿತಾಧಿಕಾರಿಗಳು ವೀಕ್ಷಿಸಿದರೂ ಯಾವುದೇ ಯೋಜನೆಗಳು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಸ್ಥಳೀಯರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ದಿನನಿತ್ಯ ವಿವಿಧ ಕೆಲಸಗಳಿಗೆ ತೆರಳುವವರಿಗೆ ಈ ಸೇತುವೆ ಉಪಯುಕ್ತವಾಗಿತ್ತು.
ಸ್ಥಳೀಯ ಯುವಕರು ಸೇರಿ ತಾತ್ಕಾಲಿಕ ಪರಿಹಾರಕ್ಕಾಗಿ ಕಂಗಿನ ಸಂಕವನ್ನು ನಿರ್ಮಿಸಿದ್ದು, ಆದರೆ ಅದು ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಶಾಶ್ವತ ಸೇತುವೆಯನ್ನು ನಿರ್ಮಿಸಿ ಸಂಬAಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹರಿಸಬೇಕೆಂದು ಊರವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page