ಪ್ರತಾಪನಗರದಲ್ಲಿ ರಸ್ತೆಗಳು ಸಂಪೂರ್ಣ ಶೋಚನೀಯ: ವಾಹನಗಳಸಹಿತ ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆ
ಉಪ್ಪಳ: ಮಳೆಗೆ ರಸ್ತೆ ಶೋಚನೀಯಾವಸ್ಥೆಗೆ ತಲುಪಿ ಸಂಚಾರ ದುಸ್ತರವಾಗಿದೆ. ಮಂಗಲ್ಪಾಡಿ ಪಂಚಾಯತ್ನ 7ನೇ ವಾರ್ಡ್ ಪ್ರತಾಪನಗರದಲ್ಲಿ ರಸ್ತೆ ಹದಗೆಟ್ಟು ಶೋಚನೀಯಾವಸ್ಥೆಗೆ ತಲುಪಿದೆ. ಸೋಂಕಾಲ್ನಿಂದ ಪ್ರತಾಪನಗರಕ್ಕೆ ತೆರಳುವ ಇಂಟರ್ಲಾಕ್ ರಸ್ತೆ ಸಮೀಪದಲ್ಲಿರುವ ಡಾಮರು ರಸ್ತೆ ವರ್ಷಗಳ ಹಿಂದೆ ಹದಗೆಡಲು ಪ್ರಾರಂಭಗೊಂಡಿತ್ತು. ಕಳೆದ ಹಲವು ದಿನಗಳಿಂದ ಸುರಿದ ಭಾರೀ ಮಳೆಗೆ ರಸ್ತೆ ಇನ್ನಷ್ಟು ಶೋಚನೀಯಾವಸ್ಥೆಗೆ ತಲುಪಿ ಕೆಸರಿನಲ್ಲಿ ವಾಹನಗಳ ಚಕ್ರ ಹೂತು ಹೋಗುತ್ತಿರುವುದು ಸವಾರರಲ್ಲಿ ಆತಂಕವನ್ನುಂಟು ಮಾಡಿದೆ. ಅಲ್ಲದೆ ಪಾದಚಾರಿಗಳಿಗೂ ಸಂಚಾರಕ್ಕೆ ಕಷ್ಟಕರವಾಗಿದೆ. ರಸ್ತೆಯನ್ನು ದುರಸ್ತಿಗೊಳಿಸಲು ಈ ಹಿಂದೆಯೇ ಸಂಬಂಧಪಟ್ಟವರನ್ನು ಒತ್ತಾಯಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ನೂರಾರು ವಾಹನಗಳು ಸಂಚಾರ ನಡೆಸುತ್ತಿರುವ ಈ ರಸ್ತೆಯಲ್ಲಿ ವಾಹನ ಸಂಚಾರ ಮೊಟಕುಗೊಳ್ಳುವ ಮೊದಲೇ ತಾತ್ಕಾಲಿಕ ದುರಸ್ತಿ ಗೊಳಿಸಬೇಕೆಂದು ಊರವರು ಒತ್ತಾಯಿಸಿದ್ದಾರೆ.