ಪ್ರಧಾನಿ ನೇತೃತ್ವದಲ್ಲಿ ನಿರ್ಣಾಯಕ ಸಭೆ ಇಂದು
ನವದೆಹಲಿ: ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಸೂಕ್ತ ತಿರುಗೇಟು ನೀಡಲು ಪ್ರಧಾನಮಂತ್ರಿ ನರೇಂದ್ರಮೋದಿಯವರ ನೇತೃತ್ವದಲ್ಲ್ಲಿ ರಾಜಕೀಯ ವ್ಯವಹಾರಗಳ ಸಂಪುಟ ಸಭೆ ನಡೆಸಲು ಇಂದು ನಡೆಯಲಿದೆ. ಇದು ಸೂಪರ್ ಕ್ಯಾಬಿನೆಟ್ ಎಂದು ಕರೆಯಲ್ಪಡುವ ಪ್ರಮುಖ ಸಮಿತಿಯಾಗಿದೆ. ಪಾಕಿಸ್ತಾನದ ವಿರುದ್ಧ ಕೈಗೊಳ್ಳಲಾಗುವ ಕ್ರಮದ ಬಗ್ಗೆ ಇಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸೂಕ್ತ ರೀತಿಯಲ್ಲಿ ಪ್ರತೀಕಾರ ನೀಡಲು ಪ್ರಧಾನಮಂತ್ರಿ ನರೇಂದ್ರಮೋದಿ ಭಾರತೀಯ ಸೇನಾ ಪಡೆಗಳಿಗೆ ನಿನ್ನೆಯೇ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಅದರಿಂದ ತೀವ್ರ ಆತಂಕಗೊಂಡಿರುವ ಪಾಕಿಸ್ತಾನ ಅದರ ಬೆನ್ನಲ್ಲೇ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ವಿಶ್ವಸಂಸ್ಥೆಗೆ ಮೊರೆ ಹೋಗಿದೆ.
ವಿಶ್ವಸಂಸ್ಥೆಯಭದ್ರತಾ ಮಂಡಳಿಯ ಪ್ರಧಾನ ಕಾರ್ಯದರ್ಶಿಗೆ ಪಾಕ್ ಪ್ರಧಾನಿ ಶಹಬಾಜ್ ಶೆರೀಫ್ ಫೋನ್ ಮಾಡಿ ಭಾರತ ನಮ್ಮ ವಿರುದ್ಧ ಯಾವುದೇ ರೀತಿಯ ದಾಳಿ ನಡೆಸದಂತೆ ಮಾಡಲು ಮಧ್ಯಪ್ರವೇಶಿಸುವಂತೆ ಅಂಗಲಾಚಿಕೊಂಡಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ಉಗ್ರ ರ ದಾಳಿ ಹಿಂದೆ ನಮ್ಮ ಕೈವಾಡವಿಲ್ಲ. ಭಾರತ ನಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದು ಉಗ್ರರ ದಾಳಿಯ ಬಗ್ಗೆ ತಟಸ್ಥ ತನಿಖೆ ನಡೆಸಲು ನಾವು ಸಿದ್ಧ. ಆದ್ದರಿಂದ ನಮ್ಮ ಮೇಲೆ ಭಾರತ ನಡೆಸಬಹುದಾದ ಸಂಭಾವ್ಯ ದಾಳಿಯನ್ನು ತಡೆಗಟ್ಟಲು ತುರ್ತಾಗಿ ಮಧ್ಯಪ್ರವೇಶಿಸುವಂತೆ ಪಾಕ್ ಪ್ರಧಾನಿ ವಿಶ್ವಸಂಸ್ಥೆಯೊಂದಿಗೆ ವಿನಂತಿಸಿಕೊಂಡಿದ್ದಾರೆ. ಮುಂದಿನ ೩೬ ತಾಸುಗಳೊಳಗಾಗಿ ಭಾರತ ನಮ್ಮ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆಯೆಂಬ ಭೀತಿ ಪಾಕಿಸ್ತಾನವನ್ನು ಕಾಡತೊಡಗಿದೆ. ಇದರಿಂದ ಬೆಚ್ಚಿ ಬಿದ್ದಿರುವ ಪಾಕಿಸ್ತಾನ ಗಡಿಪ್ರದೇಶದಲ್ಲಿ ಭಾರತದ ವಿರುದ್ಧ ಅಪ್ರಚೋದಿತ ದಾಳಿ ನಡೆಸುತ್ತಿದೆ. ಅದಕ್ಕೆಲ್ಲ ಭಾರತೀಯ ಸೇನಾ ಪಡೆ ಸೂಕ್ತವಾದ ರೀತಿಯಲ್ಲಿ ತಿರುಗೇಟು ನೀಡುತ್ತಿದೆ.