ಬಿಕೆಎಂಯು ರಾಷ್ಟ್ರೀಯ ಆಂದೋಲನ: ಕೇಂದ್ರ ಸರಕಾರಿ ಕಚೇರಿಗಳಿಗೆ ಮಾರ್ಚ್, ಧರಣಿ
ಕಾಸರಗೋಡು: ಕೇಂದ್ರ ಸರಕಾರದ ಜನದ್ರೋಹ ನೀತಿ ವಿರುದ್ಧ, ಕೃಷಿ ಕಾರ್ಮಿ ಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಬಿಕೆಎಂಯು ದೇಶವ್ಯಾಪಕವಾಗಿ ಪ್ರತಿಭಟನಾ ದಿನಾಚರಣೆ ನಡೆಸಿದೆ. ಇದರಂಗವಾಗಿ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಕೇಂದ್ರ ಸರಕಾರಿ ಕಚೇರಿಗಳಿಗೆ ಮಾರ್ಚ್, ಧರಣಿ ನಡೆಸಲಾಯಿತು. ಕೃಷಿ ಕಾರ್ಮಿಕರಿಗೆ ಸಮಗ್ರವಾದ ರಾಷ್ಟ್ರೀಯ ಕಾನೂನು ರೂಪಿಸಬೇಕು, ದೇಶದಲ್ಲಿ ಲಭ್ಯವಾದ ಹೆಚ್ಚುವರಿ ಭೂಮಿಯನ್ನು, ಸರಕಾರಿ ಭೂಮಿಯನ್ನು ಭೂರಹಿತರಿಗೆ ವಿತರಿಸಬೇಕು, ಖಾಸಗಿ ವಲಯದಲ್ಲಿ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ, ಒಬಿಸಿ ವಿಭಾಗಗಳಿಗೆ ಮೀಸಲಾತಿ ಏರ್ಪಡಿಸಬೇಕು, ಸಾರ್ವಜನಿಕ ಸಮೀಕ್ಷೆಯ ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಜಾತಿ ಸಮೀಕ್ಷೆ ನಡೆಸಬೇಕು, ಉದ್ಯೋಗ ಖಾತರಿ ಯೋಜನೆಯನ್ನು ಹಾನಿಗೊಳಿಸಲಿರುವ ಕೇಂದ್ರ ಸರಕಾರದ ಕ್ರಮ ಕೊನೆಗೊಳಿಸಬೇಕು, ಉದ್ಯೋಗ ದಿನಗಳನ್ನು 200 ಆಗಿ ಹೆಚ್ಚಿಸಬೇಕು, ವೇತನ 700 ರೂ. ಆಗಿ ಹೆಚ್ಚಿಸಬೇಕು, ಭೂಮಿಯ ನ್ಯಾಯವಾದ ವಿತರಣೆ ಖಚಿತಪಡಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಆಂದೋಲನ ನಡೆಸಲಾಗಿದೆ.
ಬಿಕೆಎಂಯು ಕಾಸರಗೋಡು ಮಂಡಲ ಸಮಿತಿಯ ನೇತೃತ್ವದಲ್ಲಿ ಕೋಳಿಯಡ್ಕ ಅಂಚೆ ಕಚೇರಿಗೆ ಮಾರ್ಚ್ ನಡೆಸಲಾಯಿತು. ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಹೊಸಂಗಡಿ ಪ್ರಧಾನ ಅಂಚೆ ಕಚೇರಿಗೆ ನಡೆದ ಮಾರ್ಚನ್ನು ಬಿಕೆಎಂಯು ಜಿಲ್ಲಾ ಕಾರ್ಯದರ್ಶಿ ಎಂ. ಕುಮಾರನ್ ಉದ್ಘಾಟಿಸಿದರು. ಪೂವಪ್ಪ ಅಧ್ಯಕ್ಷತೆ ವಹಿಸಿದರು. ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರು, ಜಿಲ್ಲಾ ಕೌನ್ಸಿಲ್ ಸದಸ್ಯ ಜಯರಾಮ ಬಲ್ಲಂಗುಡೇಲು, ಎಐವೈಎಫ್ ಜಿಲ್ಲಾಧ್ಯಕ್ಷ ಅಜಿತ್ ಎಂ.ಸಿ. ಲಾಲ್ಭಾಗ್, ಎಂ.ಡಿ. ಮುಸ್ತಫ ಕಡಂಬಾರ್, ಚಿತ್ರಾವತಿ ಅಂಜರೆ ಮಾತನಾಡಿದರು. ಚನಿಯಪ್ಪ ಬೆಜ್ಜ, ಬಾಬು ಕೋಡಿಬೈಲ್, ಶರತ್ ಬೆಜ್ಜ, ಗುರುವ ಕೋಡಿಬೈಲ್, ಕೇಶವ ಕಣ್ವತೀರ್ಥ, ಯತೀಶ್ ಬಿ.ಎಂ, ಅಬೂಬಕ್ಕರ್ ಬಡಾಜೆ, ಬಾಪಕುಂಞಿ ಬಡಾಜೆ, ಕಿರಣ್ ಮಾಡ, ನಿರಂಜನ್ ಕಣ್ವತೀರ್ಥ, ನವೀನ್ ಬಡಾಜೆ, ವಿಜಯ ಕಾಜೂರು, ಉಮೇಶ್ ಪದವು, ಪ್ರದೀಶ್ ಬಡಾಜೆ, ಶನೀಶ್ ಮಂಜೇಶ್ವರ ನೇತೃತ್ವ ನೀಡಿದರು. ಬಿಕೆಎಂಯು ಮಂಡಲ ಅಧ್ಯಕ್ಷ ಎಸ್. ರಾಮಚಂದ್ರ ಸ್ವಾಗತಿಸಿ, ಸಿಪಿಐ ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ್ ಮಾಡ ವಂದಿಸಿದರು.
ಬದಿಯಡ್ಕ ಮಂಡಲ ಸಮಿತಿ ನೇತೃತ್ವದಲ್ಲಿ ಮುಳ್ಳೇರಿಯ ಅಂಚೆ ಕಚೇರಿಗೆ ನಡೆದ ಮಾರ್ಚನ್ನು ಬಿಕೆಎಂಯು ಜಿಲ್ಲಾ ಅಧ್ಯಕ್ಷ ಗಂಗಾಧರನ್ ಪಳ್ಳಿಕಾಪಿಲ್ ಉದ್ಘಾಟಿಸಿದರು. ಬದಿಯಡ್ಕ ಮಂಡಲ ಅಧ್ಯಕ್ಷೆ ಸಿ. ಜಾನು ಅಧ್ಯಕ್ಷತೆ ವಹಿಸಿದರು. ಸಿಪಿಐ ಬದಿಯಡ್ಕ ಮಂಡಲ ಕಾರ್ಯದರ್ಶಿ ಕೆ. ಚಂದ್ರಶೇಖರ ಶೆಟ್ಟಿ, ಜಿಲ್ಲಾ ಕೌನ್ಸಿಲ್ ಸದಸ್ಯ ಎಂ. ಕೃಷ್ಣನ್, ಎಐಟಿಯುಸಿ ಮಂಡಲ ಕಾರ್ಯದರ್ಶಿ ಬಿ. ಸುಧಾಕರನ್, ಸಿಪಿಐ ಮುಳ್ಳೇರಿಯ ಲೋಕಲ್ ಕಾರ್ಯದರ್ಶಿ ಕೆ.ವಿ. ಪದ್ಮೇಶ್ ಮಾತನಾಡಿದರು. ಮಂಡಲ ಕಾರ್ಯದರ್ಶಿ ಪ್ರಕಾಶ್ ಕುಂಬ್ಡಾಜೆ ಸ್ವಾಗತಿಸಿದರು.
ಕಾರಡ್ಕ ಕೃಷಿಭವನ ಪರಿಸರದಿಂದ ಆರಂಭಗೊಂಡ ಮೆರವಣಿಗೆಗೆ ಲಕ್ಷ್ಮಿ, ವಿ. ಪ್ರಮೀಳ, ಡಿ, ಶಂಕರನ್, ಸುಮೇಶ್ ಕಾರಡ್ಕ, ಸೋಮಶೇಖರನ್, ಭವಾನಿ, ವಸಂತಿ, ಸುಂದರ ಮಣಿಯಾಣಿ ನೇತೃತ್ವ ನೀಡಿದರು. ಕಾಞಂಗಾಡ್ ಮಂಡಲ ಸಮಿತಿ, ತೃಕ್ಕರಿಪುರ ಮಂಡಲ ಸಮಿತಿಯ ನೇತೃತ್ವದಲ್ಲೂ ಪ್ರತಿಭಟನೆ ನಡೆಸಲಾಗಿದೆ.