ಭ್ರಷ್ಟಾಚಾರದಲ್ಲಿ ಮುಳುಗಿದ ಕುಂಬಳೆ ಪಂಚಾಯತ್: ಹೊಯ್ಗೆ ಕಡವಿನ ಹಣದ ವಿಚಾರದಲ್ಲಿ ಮುಸ್ಲಿಂ ಲೀಗ್ ನಾಯಕರೊಳಗೆ ಭಿನ್ನಮತ ಸ್ಫೋಟ; ಲೀಗ್ ನಾಯಕರು ರಾಜೀನಾಮೆ ನೀಡಲಿ-ಬಿಜೆಪಿ

ಕುಂಬಳೆ: ಕುಂಬಳ ಗ್ರಾಮ ಪಂಚಾಯತ್‌ನಲ್ಲಿ ಕಳೆದ 60 ವರ್ಷಗಳಿಂದ ಅಧಿಕಾರದಲ್ಲಿರುವ ಮುಸ್ಲಿಂ ಲೀಗ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆಡಳಿತವು ವ್ಯಾಪಕ ವಾದ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇದರಿಂದ ಜನ ಸಾಮಾನ್ಯರಿಗೆ ಯಾವುದೇ ರೀತಿಯ ಅಭಿವೃದ್ಧಿ ಯನ್ನು ಕಾಣದೆ ಪಂಚಾಯತ್‌ನ ಅಭಿವೃದ್ಧಿ ಕುಂಠಿತವಾಗಿದೆ ಎಂದು ಬಿಜೆಪಿ ಪಂಚಾಯತ್ ಸಮಿತಿ ಆರೋಪಿಸಿದೆ. ಕುಂಬಳೆ ಪಂಚಾಯತ್‌ನ ಅಧೀನದಲ್ಲ್ಲಿರುವ ಆರಿಕ್ಕಾಡಿ-ಶಿರಿಯಾ ಕಡವಿನ ವಿಚಾರದಲ್ಲಿ ಹಲವಾರು ರೀತಿಯಲ್ಲಿ ಮುಸ್ಲಿಂಲೀಗ್ ನಾಯಕರ ಒಳಗೆ ಜಗಳ ತಾರಕಕ್ಕೇರಿದ್ದು, ಕೆಲವು ನಾಯಕರು ಅಲ್ಲಿನ ಕಾರ್ಮಿಕರಿಂದ ನಿರಂತರವಾಗಿ ಹಣ ವಸೂಲಿ ಮಾಡಿ ಕಿರುಕುಳ ಕೊಡುವುದು ಬೆಳಕಿಗೆ ಬಂದು ಅದೇ ಕಡವಿನಲ್ಲಿ ಸೂಪರ್‌ವೈಸರ್ ಆಗಿ ಕಾರ್ಯಾಚರಿಸುತ್ತಿರುವ ಮುಸ್ಲಿಂ ಯೂತ್ ಲೀಗ್ ನಾಯಕ ಅಬ್ಬಾಸ್ ಪಂಚಾಯತ್‌ನ 23 ಚುನಾಯಿತ ಸದಸ್ಯರಿಗೆ ಈ ವಿಚಾರದಲ್ಲಿ ವಕೀಲರ ಮೂಲಕ ನೋಟೀಸು ಕಳುಹಿಸಿದುದರ ಬಗ್ಗೆ ಬಿಜೆಪಿ ಪಂಚಾಯತ್ ಸದಸ್ಯರು ಪಂಚಾಯತ್ ಕಾರ್ಯದರ್ಶಿಗೆ ದೂರು ಕೊಟ್ಟ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಜೂನ್ ೧೦ರಂದು ತುರ್ತು ಸಭೆ ಕರೆದಿದ್ದರು. ಈ ಸಭೆಯಲ್ಲಿ ಕಡವಿನ ವಿಚಾರದ ಬಗ್ಗೆ ಚರ್ಚೆ ನಡೆಸುವಾಗ ಪಂಚಾಯತ್ ಸದಸ್ಯರಾದ ಮೋಹನ್ ಕೆ ಬಂಬ್ರಾಣ ಅವರು ದೂರಿನ ಬಗ್ಗೆ ಪಂಚಾಯತ್ ಕಾರ್ಯದರ್ಶಿ ಸ್ಪಷ್ಟನೆ ಕೊಡಬೇಕು ಎಂದು ಹೇಳುವಾಗ ಆರೋಪಿ ಸ್ಥಾನದಲ್ಲಿರುವ ಉಳುವಾರು ವಾರ್ಡ್ ಸದಸ್ಯ ಯೂಸುಫ್ ಉಳುವಾರ್ ವಿರೋಧಿಸಿದ್ದರು. ಇದರಿಂದ ಬಿಜೆಪಿ ಹಾಗೂ ಮುಸ್ಲಿಂ ಲೀಗ್ ಸದಸ್ಯರ ನಡುವೆ ವಾಗ್ವಾದ ನಡೆದು ಯೂಸುಫ್ ಉಳುವಾರ್ ರಾಜೀನಾಮೆ ಕೊಡಬೇಕೆಂದು ಪಂಚಾಯತ್ ಕಾರ್ಯದರ್ಶಿಗೆ ಮನವಿ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಿಳಿಸಿ ಸಭೆಯನ್ನು ಬಹಿಷ್ಕಾರ ಮಾಡಿ ಬಿಜೆಪಿ ಪಂಚಾಯತ್ ಸದಸ್ಯರಾದ ಮೋಹನ್ ಕೆ. ಬಂಬ್ರಾಣ, ಪ್ರೇಮಲತಾ ಎಸ್, ಪ್ರೇಮಾವತಿ, ಪುಷ್ಪಲತಾ ಶೆಟ್ಟಿ, ವಿದ್ಯಾ ಎನ್ ಪೈ, ಸುಲೋಚನಾ, ವಿವೇಕಾನಂದ ಶೆಟ್ಟಿ ಹಾಗೂ ಶೋಭಾ ಎಸ್ ಅವರು ಸಭೆಯಿಂದ ಹೊರ ನಡೆದರು. ಮಾತ್ರವಲ್ಲದೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

You cannot copy content of this page