ಮಧೂರು ಭಾಗದಿಂದ ಕಾಸರಗೋಡು ರೈಲು ನಿಲ್ದಾಣ ಭಾಗಕ್ಕೆ ತೆರಳಲು ಕರಂದಕ್ಕಾಡ್ನಿಂದಲೇ ಸೌಕರ್ಯ ಏರ್ಪಡಿಸಬೇಕು- ಬಿಎಂಎಸ್
ಕಾಸರಗೋಡು: ಮಧೂರು ಭಾಗದಿಂದ ಕಾಸರಗೋಡು ಹಳೆ ಬಸ್ ನಿಲ್ದಾಣ ಭಾಗಕ್ಕೆ ವಿವಿಧ ಅಗತ್ಯಗಳಿಗಾಗಿ ದಿನಂಪ್ರತಿ ಹಲವು ವಾಹನಗಳು ತೆರಳುತ್ತಿವೆ. ಈ ವಾಹನಗಳಿಗೆ ಪ್ರಸ್ತುತ ಹೈವೇಯ ಪ್ಲಾನಿಂಗ್ ಪ್ರಕಾರ ಹೊಸ ಬಸ್ ನಿಲ್ದಾಣ ಮೂಲಕ ಸುತ್ತಾಡಿ ಕರಂದಕ್ಕಾಡ್ ಭಾಗಕ್ಕೆ ತಲುಪ ಬೇಕಾಗಿದೆ. ಇದರಿಂದ ಪ್ರಯಾಣಿಕ ರಿಗೆ ಹಾಗೂ ವಾಹನಗಳಿಗೆ ಭಾರೀ ದೂರ ಸಂಚರಿಸಬೇಕಾಗಿದ್ದು, ಇದು ಸಮಸ್ಯೆಯಾಗಿ ಪರಿಣಮಿಸಿದೆ. ಆದರೆ ಹೆದ್ದಾರಿಯ ನಿರ್ಮಾಣ ಚಟುವಟಿಕೆ ಗಳಿಗೆ ಮುಂಚೆ ಹೈವೇ ಅಧಿಕಾರಿಗಳು ಮೇಲ್ಸೇತುವೆಯ ಅಡಿಯಲ್ಲಾಗಿ ಸಾಗಲು ಸೌಕರ್ಯ ಏರ್ಪಡಿಸಿ ಕೊಡುವುದಾಗಿ ತಿಳಿಸಿದ್ದರು.
ಆದರೆ ಪ್ರಸ್ತುತದ ಪ್ಲಾನಿಂಗ್ ಪ್ರಕಾರ ಮಧೂರು ಭಾಗದಿಂದ ಬರುವ ವಾಹನಗಳು ಒಂದು ಕಿಲೋ ಮೀಟರ್ಗಿಂತ ಹೆಚ್ಚು ದೂರವನ್ನು ಸುತ್ತಾಡಿ ಕರಂದಕ್ಕಾಡ್ ಭಾಗಕ್ಕೆ ತಲುಪಿ ರೈಲ್ವೇ ನಿಲ್ದಾಣ ರಸ್ತೆಗೆ ತಲುಪಬೇಕಾದ ಸ್ಥಿತಿ ಉಂಟಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಯಾವುದೇ ತೊಂದರೆ ಉಂಟಾಗದ ರೀತಿಯಲ್ಲಿ ಕರಂದಕ್ಕಾಡು ಭಾಗದಿಂದ ರೈಲ್ವೇ ನಿಲ್ದಾಣ ಭಾಗಕ್ಕೆ ರಸ್ತೆ ದಾಟಲಿರುವ ಸೌಕರ್ಯ ಏರ್ಪಡಿಸಬೇಕಾಗಿದೆ. ಇಲ್ಲದಿದ್ದಲ್ಲಿ ಬಿಎಂಎಸ್ ನೇತೃತ್ವದಲ್ಲಿ ತೀವ್ರ ಚಳವಳಿ ನಡೆಸಬೇಕಾಗಿ ಬರಲಿದೆ ಎಂದು ಜಿಲ್ಲಾ ಜತೆ ಕಾರ್ಯದರ್ಶಿ ಪಿ. ದಿನೇಶ್ ಬಂಬ್ರಾಣ ತಿಳಿಸಿದ್ದಾರೆ. ಈ ಬಗ್ಗೆ ನಡೆದ ಸಭೆಯಲ್ಲಿ ಬಿಎಂಎಸ್ ಕಾಸರಗೋಡು ವಲಯ ಕಾರ್ಯದರ್ಶಿ ಬಾಬು ಮೋನ್ ಚೆಂಗಳ, ಆಟೋರಿಕ್ಷಾ ಮಜ್ದೂರ್ ಸಂಘ ಜಿಲ್ಲಾ ಉಪಾಧ್ಯಕ್ಷ ಎಸ್.ಕೆ. ಉಮೇಶ್, ಬಿಎಂಎಸ್ ಜಿಲ್ಲಾ ಸಮಿತಿ ಸದಸ್ಯ ಎ. ಕೇಶವ ಮೊದಲಾದವರು ಭಾಗವಹಿಸಿದರು.