ಮನೆಯ ಮೇಲಂತಸ್ತಿಗೆ ಕಲ್ಲು ಸಾಗಿಸುತ್ತಿದ್ದಾಗ ಬಿದ್ದು ಯುವಕ ದಾರುಣ ಮೃತ್ಯು
ಕುಂಬಳೆ: ಮನೆಯ ಮೇಲಿನ ಮಹಡಿಗೆ ಕಲ್ಲು ಕೊಂಡೊಯ್ಯುತ್ತಿದ್ದ ವೇಳೆ ಕಾಲು ಜಾರಿ ಕೆಳಕ್ಕೆ ಬಿದ್ದು ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕುಬಣೂರು ಬಳಿಯ ಜೋಡುಕಲ್ಲು ನವೋದಯ ನಗರದ ಕಿಟ್ಟು ಪುರುಷ ಎಂಬವರ ಪುತ್ರ ಶಶಿಧರ ಜೆ. (32) ಮೃತಪಟ್ಟ ದುರ್ದೈವಿ. ನಿನ್ನೆ ಅಪರಾಹ್ನ ಕುಬಣೂರು ಚಿನ್ನಮೊಗರು ಬನತ್ತಡಿ ಎಂಬಲ್ಲಿ ಘಟನೆ ನಡೆದಿದೆ. ಬಿದ್ದು ಗಂಭೀರ ಗಾಯಗೊಂಡ ಶಶಿಧರರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಅಪಘಾತ ಸಂಬಂಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತರು ತಾಯಿ ಮೋಹಿನಿ, ಪತ್ನಿ ನೇತ್ರ ಸುಜಯ, ಪುತ್ರ ಮಾನಸ್, ಸಹೋದರ ಜಗದೀಶ, ಸಹೋದರಿ ಪುಷ್ಪಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಶಶಿಧರರ ಅಕಾಲಿಕ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಶಶಿಧರ ಆದಿತ್ಯವಾರಗಳಂದು ಕೂಡಾ ಕೆಲಸ ನಿರ್ವಹಿಸುವ ವ್ಯಕ್ತಿಯಾಗಿದ್ದರೆಂದು ಸ್ನೇಹಿತರು ತಿಳಿಸುತ್ತಿದ್ದಾರೆ.