ಮಳೆ: ವಿವಿಧೆಡೆ ವ್ಯಾಪಕ ಹಾನಿ: ತಗ್ಗು ಪ್ರದೇಶಗಳು ನೀರಿನಿಂದಾವೃತ
ಕುಂಬಳೆ/ಉಪ್ಪಳ: ಧಾರಾಕಾ ರವಾಗಿ ಸುರಿಯುತ್ತಿರುವ ಮಳೆಯಿಂ ದಾಗಿ ಜಿಲ್ಲೆಯ ಹಲವೆಡೆಗಳಲ್ಲಿ ರಸ್ತೆಗಳು ಸಹಿತ ತಗ್ಗುಪ್ರದೇಶಗಳು ನೀರಿನಿಂದಾವೃತವಾಗಿದೆ.
ವಾಮಂಜೂರು ಚೆಕ್ಪೋಸ್ಟ್ ಬಳಿಯಲ್ಲಾಗಿ ಹರಿಯುವ ಉಪ್ಪಳ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ಸಮೀಪದ ಬಯಲು ಪ್ರದೇಶಗಳು ನೀರಿನಿಂದಾವೃತಗೊಂಡಿದೆ. ಅಲ್ಲದೆ ವಿವಿಧೆಡೆ ಮರಗಳು ಬಿದ್ದು ವ್ಯಾಪಕ ಹಾನಿ ಸಂಭವಿಸಿದೆ.
ಮಂಗಲ್ಪಾಡಿ ತಿಂಬರದಲ್ಲಿ ತೆಂಗಿನ ಮರವೊಂದು ಬುಡ ಸಮೇತ ಮಗುಚಿಬಿದ್ದು ಬಾವಿಗೆ ಹಾನಿ ಸಂಭವಿಸಿದೆ. ತಿಂಬರ ಪುಷ್ಪಾಕರ ಎಂಬವರ ಮನೆ ಬಳಿಯ ಬಾವಿ ಮೇಲೆ ತೆಂಗಿನ ಮರ ಬಿದ್ದಿದೆ. ಇದರಿಂದ ಆವರಣಗೋಡೆ ಕುಸಿದಿದ್ದು, ರಾಟೆ ಸಹಿತ ಬಾವಿಗೆ ಬಿದ್ದು ಭಾರೀ ನಾಶನಷ್ಟ ಉಂಟಾಗಿದೆ.
ವರ್ಕಾಡಿ ಪಂಚಾಯತ್ನ ಪಾತೂರು ಎಂಬಲ್ಲಿ ಅಬ್ದುಲ್ ಮದನಿ ಎಂಬವರ ಮನೆಯ ಮೇಲೆ ಸಮೀಪದ ಬೇರೊಬ್ಬರು ವ್ಯಕ್ತಿಯ ಸ್ಥಳದ ಆರಣಗೋಡೆ ಕುಸಿದಿದೆ. ಇದರಿಂದ ಮನೆಯ ಗೋಡೆಗೆ ಹಾನಿ ಉಂಟಾಗಿದೆ. ಇದರಿಂದ ಕುಟುಂಬವನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ವಾರ್ಡ್ ಸದಸ್ಯ ಮಜೀದ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಂಗಲ್ಪಾಡಿ ತಿಂಬರ ಎಂಬಲ್ಲಿ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದು ಹಾನಿ ಉಂಟಾಗಿದ್ದು, ತಿಂಬರದ ರಾಮಕೃಷ್ಣ ಹೊಳ್ಳರ ಮನೆ ಸಮೀಪ ಮರವೊಂದು ಬಿದ್ದು ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ. ಅಲ್ಲದೆ ಈ ಪರಿಸರದ ತೋಟಗಳಲ್ಲೂ ಅಡಿಕೆ ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದು ಹಾನಿಯುಂಟಾಗಿದೆ. ಈ ಕಾರಣದಿಂದಾ ಗಿ ಕಳೆದ ಮೂರು ದಿನಗಳಿಂದ ಈ ಪ್ರದೇಶದಲ್ಲಿ ವಿದ್ಯುತ್ ಮೊಟಕುಗೊಂ ಡಿದೆ. ಬಂದ್ಯೋಡು ಬಳಿಯ ಮುಟ್ಟಂನಲ್ಲಿ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ತುಂಬಿಕೊಂಡಿದೆ. ಇದರಿಂದ ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಬಂಬ್ರಾಣ ಬಯಲು ಪ್ರದೇಶದಲ್ಲೂ ನೀರು ತುಂಬಿಕೊಂಡಿದ್ದು, ಸಮೀಪದ ರಸ್ತೆ ಮುಳುಗಡೆಗೊಳ್ಳುವ ಸ್ಥಿತಿ ಉಂಟಾಗಿದೆ. ಕೊಯಿಪ್ಪಾಡಿ, ಪೆರುವಾಡ್ ಕಡಪ್ಪುರ ದಲ್ಲೂ ಕಡಲ್ಕೊರೆತ ತೀವ್ರಗೊಂಡಿದೆ.