ಮಹಿಳೆಯ ಕುತ್ತಿಗೆಯಿಂದ 2 ಪವನ್ ಚಿನ್ನದ ಸರ ಎಗರಿಸಿ ದುಷ್ಕರ್ಮಿ ಪರಾರಿ
ಕಾಸರಗೋಡು: ಜಿಲ್ಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾಗುವ ಕಳ್ಳರತಂಡ ಮತ್ತೆ ಸಕ್ರಿಯಗೊಂಡಿದೆ. ಮಧೂರು ಆಜಾದ್ ನಗರದ ಮಸೀದಿ ಸಮೀಪದ ಪಾಯಿಚ್ಚಾಲ್ ಆಜಾದ್ನಗರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೂಡ್ಲು ಪಾಯಿಚ್ಚಾಲ್ ನಿವಾಸಿ ಸಾವಿತ್ರಿ ಕೆ (೫೭) ಎಂಬವರ ಕುತ್ತಿಗೆಯಿಂದ ಸ್ಕೂಟರ್ನಲ್ಲಿ ಬಂದ ಕಳ್ಳ ಸುಮಾರು ೧ ಲಕ್ಷ ರೂ. ಮೌಲ್ಯದ ೨ ಪವನ್ ಚಿನ್ನದ ಸರ ಎಗರಿಸಿ ಪರಾರಿಯಾದ್ದಾನೆ. ನಿನ್ನೆ ಮಧ್ಯಾಹ್ನ ೧೨.೩೦ರ ವೇಳೆ ಈ ಘಟನೆ ನಡೆದಿದೆ. ಸ್ಕೂಟರ್ನಲ್ಲಿ ಬಂದ ಕಳ್ಳ ಹೆಲ್ಮೆಟ್ ಧರಿಸಿದ್ದನು. ಆದ್ದರಿಂದ ಆತನ ಗುರುತುಹಚ್ಚಲು ಸಾಧ್ಯವಾಗಿಲ್ಲ. ಸರ ಎಗರಿಸುವ ವೇಳೆ ಸಾವಿತ್ರಿ ಬೊಬ್ಬೆಹಾಕಿದ್ದು, ಅಷ್ಟರಲ್ಲಿ ಆರೋಪಿ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಸಾವಿತ್ರಿ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆ ಪರಿಸರದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಅದರಲ್ಲಿ ಸರ ಕದ್ದ ಆರೋಪಿಯ ದೃಶ್ಯ ಮೂಡಿಬಂದಿದೆ. ಅದರ ಜಾಡು ಹಿಡಿದು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇದೇ ರೀತಿ ಕೊರಕ್ಕೋಡಿನಲ್ಲೂ ನಿನ್ನೆ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸಿ ಬಂದ ಕಳ್ಳ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾಗುವ ಯತ್ನ ನಡೆಸಿದ್ದನು. ಆ ವೇಳೆ ಊರವರು ಆತನನ್ನು ಹಿಡಿಯಲೆತ್ನಿಸಿದರೂ ಅದು ವಿಫಲಗೊಂ ಡಿದೆ. ಆ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.