ಮಾದಕ ವ್ಯಸನಿ ಯುವಕನಿಂದ ಪತ್ನಿಯ ಕೊಲೆ: ತಡೆಯಲು ಬಂದ ಅತ್ತೆ-ಮಾವನಿಗೂ ಇರಿತ; ಆರೋಪಿ ಸೆರೆ
ಕಲ್ಲಿಕೋಟೆ: ಮಾದಕ ವ್ಯಸನಿಯಾದ ಯುವಕನೋರ್ವ ಪುಟ್ಟ ಮಗಳ ಕಣ್ಮುಂದೆಯೇ ಪತ್ನಿಯನ್ನು ಇರಿದು ಬರ್ಭರವಾಗಿ ಕೊಲೆಗೈದಿದ್ದು ಮಾತ್ರವಲ್ಲದೆ ಅದನ್ನು ತಡೆಯಲು ಬಂದ ಆಕೆಯ ತಂದೆ ಮತ್ತು ತಾಯಿಗೂ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಕಲ್ಲಿಕೋಟೆ ಬಳಿ ನಡೆದಿದೆ.
ಕಲ್ಲಿಕೋಟೆ ಉಂಙಾಪುಳ ಕಾಕ್ಕಾಡ್ನಲ್ಲಿ ಘಟನೆ ನಡೆದಿದೆ. ಕಾಕ್ಕಾಡ್ ನಿವಾಸಿ ಶಿಬಿಲ (23) ಕೊಲೆಗೀಡಾದ ಯುವತಿ. ಈ ದುಷ್ಕೃತ್ಯವನ್ನು ತಡೆಯಲು ಬಂದ ಆಕೆಯ ತಂದೆ ಅಬ್ದುಲ್ ರಹ್ಮಾನ್ (45) ಮತ್ತು ತಾಯಿ ಹಸೀನಾ (44)ರಿಗೂ ಆರೋಪಿ ಇರಿದು ಗಂಭೀರ ಗಾಯಗೊಳಿಸಿದ್ದು, ಅವರನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿ ಲಾಗಿದೆ. ನಿನ್ನೆ ರಾತ್ರಿ ಸುಮಾರು ೭.೨೦ರ ವೇಳೆ ಇಡೀ ಊರನ್ನೇ ನಡುಗಿಸಿದ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿ ಶಿಬಿಲಳ ಪತಿ ಪುದುಪ್ಪಾಡಿ ತಾರೋಲ್ ಮುಟ್ಟತ್ ವೀಟಿಲ್ನ ಯಾಸರ್(26)ನನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಸಂಜೆ ಕಾರಿನಲ್ಲಿ ಶಿಬಿಲಳ ತವರುಮನೆಗೆ ಬಂದ ಆರೋಪಿ ಅಲ್ಲಿದ್ದ ಪತ್ನಿ ಶಿಬಿಲಳಿಗೆ ಇರಿದು ಗಂಭೀರ ಗಾಯಗೊಳಿಸಿದನು. ಅದನ್ನು ಕಂಡ ಆಕೆಯ ಹೆತ್ತವರು ತಡೆಯಲು ಬಂದಾಗ ಆರೋಪಿ ಅವರಿಗೂ ಇರಿದು ಗಂಭೀರ ಗಾಯ ಗೊಳಿಸಿದನೆಂದು ಆರೋಪಿಸ ಲಾಗಿದೆ. ಶಿಬಿಲ ಘಟನೆ ನಡೆದ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ಆಕೆಯ ಹೆತ್ತವರನ್ನು ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತು.
ಕೊಲೆ ಬಳಿಕ ಬಂದ ಕಾರಿನಲ್ಲೇ ಆರೋಪಿ ಯಾಸರ್ ಅಲ್ಲಿಂದ ಪರಾರಿಯಾಗಿದ್ದಾನೆ. ನಂತರ ನಿನ್ನೆ ತಡರಾತ್ರಿ ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನ ವಾಹನ ಪಾರ್ಕಿಂಗ್ ಸ್ಥಳದಿಂದ ಪೊಲೀಸರು ಆತನನ್ನು ಸೆರೆಹಿಡಿಯುವಲ್ಲಿ ಸಫಲರಾದರು.
ಶಿಬಿಲ ಮತ್ತು ಯಾಸರ್ 2020ರಲ್ಲಿ ಮದುವೆಯಾಗಿದ್ದರು. ನಂತರ ಅವರಿಬ್ಬರ ಮಧ್ಯೆ ವಿರಸ ಮೂಡಿಬಂದ ಹಿನ್ನೆಲೆಯಲ್ಲಿ ಶಿಬಿಲ ಕಳೆದ ಮೂರು ತಿಂಗಳಿಂದ ತವರುಮನೆಯಲ್ಲಿ ವಾಸಿಸತೊಡ ಗಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.